ADVERTISEMENT

ವೇದಿಕೆಯ ಸಂಚಾಲಕರಿಂದ ಪ್ರತಿಭಟನೆ

223ನೇ ದಿನಕ್ಕೆ ಕಾಲಿಟ್ಟ ನೀರಾವರಿ ಹೋರಾಟ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:07 IST
Last Updated 21 ಜನವರಿ 2017, 5:07 IST

ಕೋಲಾರ: ಶಾಶ್ವತ ನೀರಾವರಿ ಯೋಜನೆಜಾರಿಗೆ ಒತ್ತಾಯಿಸಿ ನಗರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ  ಹೋರಾಟ ಶುಕ್ರವಾರ 223ನೇ ದಿನ ಪೂರ್ಣಗೊಳಿಸಿದೆ. ನೀರಾವರಿ ಹೋರಾಟ ವೇದಿಕೆಯ ಸಂಚಾಲಕರೇ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಸಮಿತಿಯ ಸಂಚಾಲಕ ವಿ.ಕೆ.ರಾಜೇಶ್ ಮಾತನಾಡಿ, ‘ಈ ಹಿಂದೆ ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗುತ್ತಿದ್ದರಿಂದ  ಉತ್ತಮ ಬೆಳೆಗಳಾಗಿ ರೈತರು ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಬದಲಾದ ಕಾಲದಿಂದ ರೈತರು ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳೆಯರು ನೀರಿಗಾಗಿ ಕೊಳವೆ ಬಾವಿ ಮತ್ತು ಟ್ಯಾಂಕರ್‌ ನೀರಿನ ಮೇಲೆ ಅವಲಂಭಿತರಾಗಿದ್ದು, ಹಣ ಕೊಟ್ಟು ಖರೀದಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ಸಮಸ್ಯೆಯಲ್ಲಿರುವ ಜನರು ನೋವು ಅನುಭವಿಸುತ್ತಾ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ. ಇದರ ಪರಿಣಾಮ ಏನು ಎಂಬುದು ಜನಪ್ರತಿನಿಧಿಗಳಿಗೆ ಅರ್ಥವಾಗುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು.

ಮತ್ತೊಬ್ಬ ಸಂಚಾಲಕ ಮಂಜುನಾಥ್ ಮಾತನಾಡಿ, ‘ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾವಾಗಬೇಕಾದರೆ ಯುವಕರು ಹೆಚ್ಚಾಗಿ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಶಕ್ತಿ ತುಂಬಬೇಕು. ತೆಲಂಗಾಣ ರಾಜ್ಯ ರಚನೆಗಾಗಿ ಯುವಕರು ಹೋರಾಟದಲ್ಲಿ ತೊಡಗಿಸಿಕೊಂಡ ಪರಿಣಾಮ ಪ್ರತ್ಯೇಕ ರಾಜ್ಯ ರಚನೆಯು ಸಾಧ್ಯವಾಯಿತು. ಅದೇ ರೀತಿ ಕೋಲಾರದಲ್ಲಿಯೂ ಯುವಶಕ್ತಿ ಮುಂದೆ ಬಂದಾಗ ಮಾತ್ರ ನಾವು ಶಾಶ್ವತ ನೀರು ಪಡೆಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

7 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುಮಾರು ವರ್ಷಗಳಿಂದ ಬರ ಪರಿಸ್ಥಿತಿ ಎದುರಾಗಿದೆ. ಸರ್ಕಾರದ ಸಚಿವ ಸಂಪುಟದ ತಂಡ, ಅಧಿಕಾರಿಗಳ ತಂಡ ಜಿಲ್ಲೆಗಳಿಗೆ ಭೇಟಿ ಅಧ್ಯಯನ ನಡೆಸಿದೆ. ಆದರೆ ಯಾವುದೇ ಕ್ರಮಕೈಗೊಂಡಿಲ್ಲ. ಸರ್ಕಾರ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಕೊಡಲು ಸಾಧ್ಯವಾಗದಿದ್ದರೆ ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಲಿ ಎಂದು ಒತ್ತಾಯಿಸಿದರು.

ವೇದಿಕೆಯ ಸಂಚಾಲಕರಾದ ಕೆ.ಸಿ.ಲೋಕೇಶ್, ರವೀಂದ್ರ, ಕೆ.ಸಿ.ಸಂತೋಷ್, ಮುರಳಿ, ರೌತ್ ಶಂಕರಪ್ಪ, ತ್ಯಾಗರಾಜ್ ಮುದ್ದಪ್ಪ, ರಾಮಕೃಷ್ಣಪ್ಪ, ಪ್ರಕಾಶ್, ಜಿ.ಶಂಕರನಾರಾಯಣಶೆಟ್ಟಿ, ಮಂಜುನಾಥ್, ನಾರಾಯಣಸ್ವಾಮಿ, ರೂಪ, ಸುನಿತಾ, ಗಾಯತ್ರಿ, ಮಂಜುಳಾ, ಗೀತಮ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.