ADVERTISEMENT

ಶಿಶು ಎಸೆದವರ ಸಂಬಂಧ ಬೆಸೆದರು

ಬೀದಿ ನಾಯಿಗಳಿಗೆ ಬಲಿಯಾದ ನವಜಾತ ಶಿಶುವಿನ ಹೆತ್ತವರ ಜಾಡು ಹಿಡಿದು ಹೋದ ಅಧಿಕಾರಿಗಳು, ಪ್ರೀತಿಸಿ ದೂರವಾಗಿದ್ದ ಜೋಡಿಗೆ ವಿವಾಹ ಮಾಡಿದರು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 7:06 IST
Last Updated 6 ಏಪ್ರಿಲ್ 2018, 7:06 IST

ಗೌರಿಬಿದನೂರು: ಪರಿತ್ಯಕ್ತಗೊಂಡು ಬೀದಿನಾಯಿಗಳ ದಾಳಿಗೆ ಬಲಿಯಾದ ನವಜಾತ ಶಿಶುವಿನ ಹೆತ್ತವರ ಜಾಡು ಹಿಡಿದು ಹೋದ ಅಧಿಕಾರಿಗಳು, ಪ್ರೀತಿಸಿ ದೂರವಾಗಿದ್ದ ಪ್ರೇಮಿಗಳಿಗೆ ವಿವಾಹ ಮಾಡಿಸಿದ್ದಾರೆ.ಗುರುವಾರ ಪಟ್ಟಣ ಹೊರವಲಯದ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದ ಈ ವಿವಾಹಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾಂತ್ವನ ಕೇಂದ್ರ ಅಧಿಕಾರಿಗಳು ಸೇರಿದಂತೆ ಅನೇಕರು ಸಾಕ್ಷಿಯಾದರು.

ಏನಿದು ಘಟನೆ?

ತಾಲ್ಲೂಕಿನ ಹುದುಗೂರು ಗ್ರಾಮದ ಹೊರವಲಯದಲ್ಲಿ ತಿಂಗಳ ಹಿಂದೆ ಬೇಲಿಯಲ್ಲಿ ನವಜಾತ ಗಂಡು ಶಿಶುವನ್ನು ಎಸೆದು ಹೋಗಲಾಗಿತ್ತು. ನಾಯಿಗಳ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಶಿಶು ಅಸುನೀಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಸ್ಥಳೀಯರಾದ ಸುರೇಶ್ ಎಂಬುವವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ADVERTISEMENT

ಶಿಶುವಿನ ಪೋಷಕರ ಪತ್ತೆಗೆ ಮುಂದಾದವರಿಗೆ ಹುದುಗೂರಿನ ಭಗ್ನಪ್ರೇಮಿಗಳ ಕಥೆಯೊಂದು ತಿಳಿದು ಬಂದಿತ್ತು. ಅದರ ಜಾಡು ಹಿಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಎನ್.ಪಿ.ರಾಜೇಂದ್ರಪ್ರಸಾದ್ ಮತ್ತು ಸಾಂತ್ವನ ಕೇಂದ್ರದ ಮುಖ್ಯಸ್ಥೆ ಸೌಭಾಗ್ಯಮ್ಮ ಇತ್ತೀಚೆಗೆ ಆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಗ್ರಾಮದವರೇ ಆದ ಶಿವಲಿಂಗ (27) ಹಾಗೂ ಮಮತಾ (26) ಎಂಬುವರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೀತಿ ಪ್ರಣಯಕ್ಕೆ ತಿರುಗಿ ಮಮತಾ ಗರ್ಭಿಣಿಯಾಗಿದ್ದರು. ಇದನ್ನು ತಿಳಿಯುತ್ತಿದ್ದಂತೆ ಶಿವಲಿಂಗ ಆಕೆಯನ್ನು ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದರು. ಇದರಿಂದ ವಿಚಲಿತಳಾದ ಮಮತಾ ಶಿಶುವನ್ನು ಬೇಲಿಯಲ್ಲಿ ಎಸೆದ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂತು.

ಬುಧವಾರ ಪ್ರೇಮಿಗಳು ಮತ್ತವರ ಕುಟುಂಬದವರೊಂದಿಗೆ ಚರ್ಚೆ ನಡೆಸಿದ ರಾಜೇಂದ್ರಪ್ರಸಾದ್ ಅವರು ಪ್ರೇಮಿಗಳಿಗೆ ವಿವಾಹ ಮಾಡಿಕೊಳ್ಳುವಂತೆ ಮನವೊಲಿಸಿದ್ದರು. ಅದಕ್ಕೆ ಇಬ್ಬರೂ ಒಪ್ಪಿದ ನಂತರ ದೇವಸ್ಥಾನದಲ್ಲಿ ಸರಳವಾಗಿ ಮದುವೆ ಶಾಸ್ತ್ರ ನೆರೆವೇರಿಸಲಾಯಿತು. ನಂತರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿವಾಹ ನೋಂದಾಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.