ADVERTISEMENT

ಸಮಾನ ಸಮಾಜದ ಕನಸು ನನಸಾಗಲಿ

ಡಾ.ಜಚನಿ ಜಯಂತ್ಯುತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 8:23 IST
Last Updated 21 ಅಕ್ಟೋಬರ್ 2014, 8:23 IST
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ನಡೆದ ಡಾ.ಜಚನಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ದೀಪ ಬೆಳಗಿದರು. ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ಕೆ.ಸಿ.ರಾಜಾಕಾಂತ್‌, ಶಾಸಕ ಡಾ.ಕೆ.ಸುಧಾಕರ್‌, ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಚಂದ್ರಶೇಖರ್‌ ಮತ್ತಿತರರು ಇದ್ದಾರೆ
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ನಡೆದ ಡಾ.ಜಚನಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ದೀಪ ಬೆಳಗಿದರು. ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ಕೆ.ಸಿ.ರಾಜಾಕಾಂತ್‌, ಶಾಸಕ ಡಾ.ಕೆ.ಸುಧಾಕರ್‌, ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಚಂದ್ರಶೇಖರ್‌ ಮತ್ತಿತರರು ಇದ್ದಾರೆ   

ಚಿಕ್ಕಬಳ್ಳಾಪುರ: ಜಾತಿ–ಧರ್ಮ ಕುರಿತ ಕೀಳಿರಿಮೆ, ತಾರತಮ್ಯ ಕೊನೆಗಾಣಿಸಿ ಎಲ್ಲ­ರನ್ನೂ ಸಮಾನರನ್ನಾಗಿ ಕಾಣು­ವುದು ಡಾ.ಜಚನಿಯವರ ಆಶಯ­ವಾಗಿತ್ತು. ಅಸ್ಪೃಶ್ಯತೆ ಮತ್ತು ಅಪನಂಬಿಕೆ­ಯಿರದ ಸಮಾಜ ನಿರ್ಮಾಣ ಅವರ ಕನಸಾಗಿತ್ತು ಎಂದು ನಿಡುಮಾಮಿಡಿ ಮಠದ ವೀರ­ಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.

ನಿಡುಮಾಮಿಡಿ ಪೀಠಾಧೀಶರಾಗಿದ್ದ ಡಾ.ಜಚನಿಯವರ 106ನೇ ಜಯಂತ್ಯು­ತ್ಸವದ ಅಂಗವಾಗಿ ನಗರದ ಡಾ.ಬಿ.­ಆರ್‌.ಅಂಬೇಡ್ಕರ್‌ ಭವನದಲ್ಲಿ ಸೋಮ­­­ವಾರ ಆಯೋಜಿಸಿದ್ದ ಕಾರ್ಯ­ಕ್ರಮ­ದಲ್ಲಿ ಮಾತನಾಡಿ, ಜಚನಿಯವರ ತತ್ವ, ಸಿದ್ಧಾಂತ,  ವಿಚಾರಗಳನ್ನು ಅಳ­ವಡಿಸಿಕೊಂಡಲ್ಲಿ ನವಸಮಾಜ ನಿರ್ಮಿಸ­ಬಹುದು. ಎಲ್ಲರನ್ನೂ ಪ್ರೀತಿ ಮತ್ತು ಕರುಣೆಯಿಂದ ಕಾಣುವ ಮನೋ­­ಭಾವ ರೂಢಿಸಿಕೊಳ್ಳಬಹುದು. ಪರಿವರ್ತನೆಗೆ ಪ್ರಯತ್ನಿಸಬಹುದು ಎಂದರು.

ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯಿಕವಾಗಿಯೂ ಡಾ.ಜಚನಿ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ದಲಿ­ತರಿಗೆ ದೇವಾಲಯ ಪ್ರವೇಶಿಸಲು ಅವ­ಕಾಶ ಮಾಡಿಕೊಟ್ಟ ಅವರು, 1945­ರಲ್ಲಿ ಅಂತರ್ಜಾತಿ ವಿವಾಹ ಸಹ ನೆರ­ವೇರಿಸಿದರು. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಅವರು ಹಲವಾರು ಕೃತಿ­ಗಳನ್ನು ರಚಿಸಿದರು. ಜೀವನದ ಕೊನೆಯ­ವರೆಗೂ ಕನ್ನಡ ಅಂಕಿಗಳನ್ನು ಬಳಸಿದರು ಎಂದು ಅವರು ತಿಳಿಸಿದರು.

ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಮಾತ­­­­ನಾಡಿ, ಡಾ.ಜಚನಿಯವರು ಅತ್ಯಂತ ಕಡಿಮೆ ಅವಧಿಯಲ್ಲೇ ಅಪಾರ ಸಾಮಾಜಿಕ ಪರಿವರ್ತನೆ ಕೆಲಸ ಮಾಡಿ­ದರು. ಕೃತಿಗಳ ಮೂಲಕ ಅಲ್ಲದೇ ಪ್ರವ­ಚನ ಮತ್ತು ಸಂದೇಶಗಳ ಮೂಲಕವೂ ಜಾಗೃತಿ ಮೂಡಿಸಿದರು. ಅವರು ಸಾರಿದ ಸಂದೇಶಗಳಲ್ಲಿ ಶೇ 50ರಷ್ಟು ಪಾಲಿಸಿ­ದರೂ ನಾವು ಪರಿಪೂರ್ಣ ವ್ಯಕ್ತಿಗಳಾ­ಗುತ್ತೇವೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡ­ಬೇಕಿದೆ ಎಂದರು.

ಶಾಸಕ ಡಾ.ಕೆ.ಸುಧಾಕರ್‌ ಮಾತ­ನಾಡಿ, ಡಾ.ಜಚನಿಯವರ ಕುರಿತು ಎಲ್ಲರೂ ಅಧ್ಯಯನ ಮಾಡಬೇಕು. ಸಾಮಾ­ಜಿಕ ಪರಿವರ್ತನೆ ಕುರಿತು ಅವರು ಹೊಂದಿದ್ದ ಆಶಯ ಮತ್ತು ಕನಸು­ಗಳನ್ನು ನನಸು ಮಾಡುವ ನಿಟ್ಟಿ­ನಲ್ಲಿ ನಾವು ಶ್ರಮಿಸಬೇಕು ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಕೆ.­ಎಂ.­ನಯಾಜ್‌ ಅಹಮದ್‌  ವಿಶೇಷ ಉಪ­ನ್ಯಾಸ ನೀಡಿದರು. ಅಂಧ ಗಾಯಕ ಮಹಾಲಿಂಗಯ್ಯ ಮಠದ್‌ ಮತ್ತು ತಂಡದ ಸದಸ್ಯರು ಗೀತೆಗಳನ್ನು ಹಾಡಿ­ದರು. ದಲಿತ ಸಂಘರ್ಷ ಸಮಿತಿ ಸಂಚಾಲಕ ಕೆ.ಸಿ.ರಾಜಾಕಾಂತ್‌, ಕರ್ನಾ­ಟಕ ರಕ್ಷಣಾ ವೇದಿಕೆ ಮುಖಂಡ ಚಂದ್­ರಶೇಖರ್‌, ಕಾಂಗ್ರೆಸ್ ಮುಖಂಡ ಕೃಷ್ಣ­ಮೂರ್ತಿ ಮತ್ತಿತರರು ಈ ಸಂದರ್ಭ­ದಲ್ಲಿ ಉಪಸ್ಥಿತರಿದ್ದರು.

ಮೂಢ ನಂಬಿಕೆ ವಿರೋಧಿ ಕಾಯ್ದೆ ಜಾರಿಯಾಗಲಿ
ಚಿಕ್ಕಬಳ್ಳಾಪುರ:
ವೇಶ್ಯಾವಾಟಿಕೆ ಕಾನೂನುಬದ್ಧ­ಗೊಳ್ಳು­ವುದರಿಂದ ಸಮಾಜ­ದಲ್ಲಿ ಅಪಾಯಕಾರಿ ಬೆಳವಣಿಗೆಗಳು ತಲೆದೋರುವ ಸಾಧ್ಯತೆಯಿದ್ದು, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಇದಕ್ಕೆ ಪೂರಕವಾದ ಕ್ರಮ ತೆಗೆದು­ಕೊಳ್ಳಬಾರದು ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸೋಮವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿ­ಗಾರರೊಂದಿಗೆ ಮಾತನಾಡಿದ ಅವರು, ವೇಶ್ಯಾವಾಟಿಕೆ ಕಾನೂನು­ಬದ್ಧ­ಗೊಳಿ­ಸಲು ಕೆಲ ಚಿಂತ­ಕರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಆದರೆ ಅವರ ಒತ್ತಾ­ಯಕ್ಕೆ ಸರ್ಕಾರಕ್ಕೆ ಮಣಿಯಬಾರದು. ಈ ವಿಷಯ­ದಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.

ಆಧುನಿಕ ಜೀವನ­ಶೈಲಿಯಿಂದ ಈಗಾಗಲೇ ಕೌಟಂಬಿಕ ವ್ಯವಸ್ಥೆ ದುರ್ಬಲ­ಗೊಳ್ಳುತ್ತಿದ್ದು, ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಿದರೆ ನರಕಮಯ ಪರಿ­ಸ್ಥಿತಿ ನಿರ್ಮಾಣಗೊಳ್ಳಲಿದೆ. ವೇಶ್ಯಾ­ವಾಟಿಕೆಯಿಂದ ಮಹಿಳೆಯರು ಇನ್ನಷ್ಟು ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗಲಿದ್ದಾರೆ. ದೇವದಾಸಿ ಮತ್ತು ಇನ್ನಿತರ ಅಮಾನ­ವೀಯ ಪದ್ಧತಿ ನಿರ್ಮೂಲನೆ ಮಾಡುತ್ತಿರುವ ಸಂದರ್ಭದಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧ­ಗೊಳಿ­ಸುವುದು ಸರಿಯಲ್ಲ ಎಂದರು.

ಉಪವಾಸ ಸತ್ಯಾಗ್ರಹ: ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿ­ಗೊಳಿ­ಸವುದು ಸೇರಿದಂತೆ ಇತರೆ 11 ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ವಿವಿಧ ಮಠಾ­ಧೀಶರು ಮತ್ತು ಮಾತೆಯರ ಸಮ್ಮುಖದಲ್ಲಿ ಚಳಿಗಾಲ ಅಧಿವೇಶನದ ಸಂದರ್ಭ­ದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದ ಎಂದರು.

ನಯಾಜ್ ಅವರನ್ನು ಸ್ವಾಮೀಜಿ ಮಾಡುತ್ತಿದ್ದೆ
ಚಿಕ್ಕಬಳ್ಳಾಪುರ:
ಪ್ರಾಧ್ಯಾಪಕ ಡಾ.ಕೆ.­ಎಂ.ನಯಾಜ್‌ ಅಹಮದ್‌ ಅವರು ಒಂದು ವೇಳೆ ಮದುವೆಯಾ­ಗಿರ­ದಿದ್ದರೆ, ಅವರನ್ನು ನಿಡುಮಾಮಿಡಿ ಮಠದ ಪೀಠಾಧೀಶ ಮಾಡುತ್ತಿದ್ದೆ. ಸ್ವಾಮೀ­ಜಿ­ಯಾಗಲು ಅವರು ಅರ್ಹರಾ­ಗಿದ್ದರು ಎಂದು ವೀರಭದ್ರ ಚನ್ನಮಲ್ಲ ಸ್ವಾಮೀಜಿ ತಿಳಿಸಿದರು.

ಹಲ ವಿಚಾರ ಅರಿತಿರುವ ನಯಾಜ್‌ ಅಹಮದ್‌ ಸ್ವಾಮೀಜಿ­ಯಾಗಲು ಅರ್ಹ ವ್ಯಕ್ತಿ. ಮದುವೆ­ಯಾಗಲು ಅವರು ಕೊಂಚ ತಡ ಮಾಡಿ­ದ್ದರೆ, ಖಂಡಿತ ಅವರನ್ನು ಸ್ವಾಮೀಜಿಯಾಗಿಸುತ್ತಿದ್ದೆ. ಮನ­ದಲ್ಲಿ ಹಲ ದಿನಗಳಿಂದ ಕಾಡುತ್ತಿದ್ದ ಈ ಅನಿಸಿಕೆಯನ್ನು ಇಂದು ಹಂಚಿ­ಕೊಂಡಿ­ದ್ದೇನೆ ಎಂದು ಅವರು ತಿಳಿ­ಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.