ಚಿಕ್ಕಬಳ್ಳಾಪುರ: ಜಾತಿ–ಧರ್ಮ ಕುರಿತ ಕೀಳಿರಿಮೆ, ತಾರತಮ್ಯ ಕೊನೆಗಾಣಿಸಿ ಎಲ್ಲರನ್ನೂ ಸಮಾನರನ್ನಾಗಿ ಕಾಣುವುದು ಡಾ.ಜಚನಿಯವರ ಆಶಯವಾಗಿತ್ತು. ಅಸ್ಪೃಶ್ಯತೆ ಮತ್ತು ಅಪನಂಬಿಕೆಯಿರದ ಸಮಾಜ ನಿರ್ಮಾಣ ಅವರ ಕನಸಾಗಿತ್ತು ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.
ನಿಡುಮಾಮಿಡಿ ಪೀಠಾಧೀಶರಾಗಿದ್ದ ಡಾ.ಜಚನಿಯವರ 106ನೇ ಜಯಂತ್ಯುತ್ಸವದ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜಚನಿಯವರ ತತ್ವ, ಸಿದ್ಧಾಂತ, ವಿಚಾರಗಳನ್ನು ಅಳವಡಿಸಿಕೊಂಡಲ್ಲಿ ನವಸಮಾಜ ನಿರ್ಮಿಸಬಹುದು. ಎಲ್ಲರನ್ನೂ ಪ್ರೀತಿ ಮತ್ತು ಕರುಣೆಯಿಂದ ಕಾಣುವ ಮನೋಭಾವ ರೂಢಿಸಿಕೊಳ್ಳಬಹುದು. ಪರಿವರ್ತನೆಗೆ ಪ್ರಯತ್ನಿಸಬಹುದು ಎಂದರು.
ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯಿಕವಾಗಿಯೂ ಡಾ.ಜಚನಿ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ದಲಿತರಿಗೆ ದೇವಾಲಯ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ಅವರು, 1945ರಲ್ಲಿ ಅಂತರ್ಜಾತಿ ವಿವಾಹ ಸಹ ನೆರವೇರಿಸಿದರು. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಅವರು ಹಲವಾರು ಕೃತಿಗಳನ್ನು ರಚಿಸಿದರು. ಜೀವನದ ಕೊನೆಯವರೆಗೂ ಕನ್ನಡ ಅಂಕಿಗಳನ್ನು ಬಳಸಿದರು ಎಂದು ಅವರು ತಿಳಿಸಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಡಾ.ಜಚನಿಯವರು ಅತ್ಯಂತ ಕಡಿಮೆ ಅವಧಿಯಲ್ಲೇ ಅಪಾರ ಸಾಮಾಜಿಕ ಪರಿವರ್ತನೆ ಕೆಲಸ ಮಾಡಿದರು. ಕೃತಿಗಳ ಮೂಲಕ ಅಲ್ಲದೇ ಪ್ರವಚನ ಮತ್ತು ಸಂದೇಶಗಳ ಮೂಲಕವೂ ಜಾಗೃತಿ ಮೂಡಿಸಿದರು. ಅವರು ಸಾರಿದ ಸಂದೇಶಗಳಲ್ಲಿ ಶೇ 50ರಷ್ಟು ಪಾಲಿಸಿದರೂ ನಾವು ಪರಿಪೂರ್ಣ ವ್ಯಕ್ತಿಗಳಾಗುತ್ತೇವೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ ಎಂದರು.
ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ಡಾ.ಜಚನಿಯವರ ಕುರಿತು ಎಲ್ಲರೂ ಅಧ್ಯಯನ ಮಾಡಬೇಕು. ಸಾಮಾಜಿಕ ಪರಿವರ್ತನೆ ಕುರಿತು ಅವರು ಹೊಂದಿದ್ದ ಆಶಯ ಮತ್ತು ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹಮದ್ ವಿಶೇಷ ಉಪನ್ಯಾಸ ನೀಡಿದರು. ಅಂಧ ಗಾಯಕ ಮಹಾಲಿಂಗಯ್ಯ ಮಠದ್ ಮತ್ತು ತಂಡದ ಸದಸ್ಯರು ಗೀತೆಗಳನ್ನು ಹಾಡಿದರು. ದಲಿತ ಸಂಘರ್ಷ ಸಮಿತಿ ಸಂಚಾಲಕ ಕೆ.ಸಿ.ರಾಜಾಕಾಂತ್, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮೂಢ ನಂಬಿಕೆ ವಿರೋಧಿ ಕಾಯ್ದೆ ಜಾರಿಯಾಗಲಿ
ಚಿಕ್ಕಬಳ್ಳಾಪುರ: ವೇಶ್ಯಾವಾಟಿಕೆ ಕಾನೂನುಬದ್ಧಗೊಳ್ಳುವುದರಿಂದ ಸಮಾಜದಲ್ಲಿ ಅಪಾಯಕಾರಿ ಬೆಳವಣಿಗೆಗಳು ತಲೆದೋರುವ ಸಾಧ್ಯತೆಯಿದ್ದು, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಇದಕ್ಕೆ ಪೂರಕವಾದ ಕ್ರಮ ತೆಗೆದುಕೊಳ್ಳಬಾರದು ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸೋಮವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಲು ಕೆಲ ಚಿಂತಕರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಆದರೆ ಅವರ ಒತ್ತಾಯಕ್ಕೆ ಸರ್ಕಾರಕ್ಕೆ ಮಣಿಯಬಾರದು. ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.
ಆಧುನಿಕ ಜೀವನಶೈಲಿಯಿಂದ ಈಗಾಗಲೇ ಕೌಟಂಬಿಕ ವ್ಯವಸ್ಥೆ ದುರ್ಬಲಗೊಳ್ಳುತ್ತಿದ್ದು, ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಿದರೆ ನರಕಮಯ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ. ವೇಶ್ಯಾವಾಟಿಕೆಯಿಂದ ಮಹಿಳೆಯರು ಇನ್ನಷ್ಟು ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗಲಿದ್ದಾರೆ. ದೇವದಾಸಿ ಮತ್ತು ಇನ್ನಿತರ ಅಮಾನವೀಯ ಪದ್ಧತಿ ನಿರ್ಮೂಲನೆ ಮಾಡುತ್ತಿರುವ ಸಂದರ್ಭದಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸುವುದು ಸರಿಯಲ್ಲ ಎಂದರು.
ಉಪವಾಸ ಸತ್ಯಾಗ್ರಹ: ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸವುದು ಸೇರಿದಂತೆ ಇತರೆ 11 ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ವಿವಿಧ ಮಠಾಧೀಶರು ಮತ್ತು ಮಾತೆಯರ ಸಮ್ಮುಖದಲ್ಲಿ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದ ಎಂದರು.
ನಯಾಜ್ ಅವರನ್ನು ಸ್ವಾಮೀಜಿ ಮಾಡುತ್ತಿದ್ದೆ
ಚಿಕ್ಕಬಳ್ಳಾಪುರ: ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹಮದ್ ಅವರು ಒಂದು ವೇಳೆ ಮದುವೆಯಾಗಿರದಿದ್ದರೆ, ಅವರನ್ನು ನಿಡುಮಾಮಿಡಿ ಮಠದ ಪೀಠಾಧೀಶ ಮಾಡುತ್ತಿದ್ದೆ. ಸ್ವಾಮೀಜಿಯಾಗಲು ಅವರು ಅರ್ಹರಾಗಿದ್ದರು ಎಂದು ವೀರಭದ್ರ ಚನ್ನಮಲ್ಲ ಸ್ವಾಮೀಜಿ ತಿಳಿಸಿದರು.
ಹಲ ವಿಚಾರ ಅರಿತಿರುವ ನಯಾಜ್ ಅಹಮದ್ ಸ್ವಾಮೀಜಿಯಾಗಲು ಅರ್ಹ ವ್ಯಕ್ತಿ. ಮದುವೆಯಾಗಲು ಅವರು ಕೊಂಚ ತಡ ಮಾಡಿದ್ದರೆ, ಖಂಡಿತ ಅವರನ್ನು ಸ್ವಾಮೀಜಿಯಾಗಿಸುತ್ತಿದ್ದೆ. ಮನದಲ್ಲಿ ಹಲ ದಿನಗಳಿಂದ ಕಾಡುತ್ತಿದ್ದ ಈ ಅನಿಸಿಕೆಯನ್ನು ಇಂದು ಹಂಚಿಕೊಂಡಿದ್ದೇನೆ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.