ADVERTISEMENT

ಸಾಲ ವಿತರಿಸಲು ನಿರಾಕರಣೆ:ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 5:51 IST
Last Updated 22 ಮಾರ್ಚ್ 2017, 5:51 IST

ಚಿಕ್ಕಬಳ್ಳಾಪುರ: ‘ಪಶುಭಾಗ್ಯ’ ಯೋಜನೆ ಫಲಾನುಭವಿಗೆ ಸಾಲ ಮಂಜೂರು ಮಾಡಲು ಕೆನರಾ ಬ್ಯಾಂಕಿನ ಎಂ.ಜಿ.ರಸ್ತೆ ಶಾಖೆ ವ್ಯವಸ್ಥಾಪಕ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ಕಾರ್ಯಕರ್ತರು ಮಂಗಳವಾರ ಬ್ಯಾಂಕಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.

ಬ್ಯಾಂಕಿನೊಳಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಾಗಿಲಲ್ಲೇ ತಡೆದರು. ಈ ವೇಳೆ ಜೆಡಿ ಎಸ್‌ ಮುಖಂಡರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್, ‘ಪಶುಭಾಗ್ಯ ಯೋಜ ನೆಯ ಫಲಾನುಭವಿಯಾದ ತಿಪ್ಪೇನ ಹಳ್ಳಿಯ ಪರಿಶಿಷ್ಟ ಜಾತಿಯ ಮಹಿಳೆ ಯೊಬ್ಬರಿಗೆ ₹ 60 ಸಾವಿರ ಸಾಲ ಮಂ ಜೂರು ಮಾಡಲು ಬ್ಯಾಂಕ್‌ ವ್ಯವಸ್ಥಾಪ ಕರು ನಿರಾಕರಿಸುತ್ತ ಬರುತ್ತಿದ್ದಾರೆ.

ಸಾಲ ಮಂಜೂರು ಮಾಡಿ ಮನವಿ ಮಾಡಲು ಹೋದ ತಾಲ್ಲೂಕು ಪಂಚಾಯಿತಿ ಸದಸ್ಯ ರೊಬ್ಬರಿಗೆ ಸಾಲದ ಭದ್ರತೆಗೆ ನೀವು ಸಹಿ ಹಾಕುತ್ತೀರಾ ಎಂದು ಉದ್ಧಟನದಿಂದ ವರ್ತಿಸಿದ್ದಾರೆ. ಭೂದಾಖಲೆ ಹೊಂದಿ ರುವ ಯಾರೇ ಆದರೂ ಸಾಲದ ಭದ್ರತೆಗೆ ಸಹಿ ಹಾಕಬಹುದು ಎಂದು ಹೇಳಿದರೂ ಒಪ್ಪುತ್ತಿಲ್ಲ. ಸಾಲ ನೀಡಲು ಒಪ್ಪುವ ವರೆಗೂ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ’ ಎಂದರು.

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ‘ಲೀಡ್‌ ಬ್ಯಾಂಕ್‌ನ ಆದೇಶ ವನ್ನು ಪ್ರತಿ ಬ್ಯಾಂಕ್‌ ಶಾಖೆ ಪಾಲಿಸಬೇಕು. ಆದರೆ ಈ ಶಾಖೆಯ ವ್ಯವಸ್ಥಾಪಕ ನಿಯಮಾವಳಿಗಳನ್ನು ಗಾಳಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ.ಮುನೇಗೌಡ, ಮುಖಂಡರಾದ ಲಾಯರ್ ನಾರಾಯಣಸ್ವಾಮಿ, ಸತೀಶ್, ಶಿವಕುಮಾರ್, ವೆಂಕಟೇಶ್, ಬಾಬು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.