ADVERTISEMENT

ಅಂತರಘಟ್ಟೆ ದುರ್ಗಾಂಬ ರಥೋತ್ಸವ: ಸಿದ್ಧತೆ

₹ 6 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪ, ಜನರೇಟರ್ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:30 IST
Last Updated 6 ಫೆಬ್ರುವರಿ 2017, 5:30 IST

ಕಡೂರು: ಇಲ್ಲಿನ ಪ್ರಸಿದ್ಧ ಅಂತರ ಘಟ್ಟೆಯ ದುರ್ಗಾಂಬ ದೇವಿ ರಥೋತ್ಸವ  ಇದೇ 7, 8 ಹಾಗೂ 9ರಂದು ನಡೆಯ ಲಿದ್ದು, ಅಗತ್ಯ ಸಿದ್ಧತೆಯನ್ನು ತಾಲ್ಲೂಕು ಆಡಳಿತ ಕೈಗೊಂಡಿದೆ ಎಂದು ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು.

ಕಡೂರಿನ ಯಗಟಿಯ ತಮ್ಮ ನಿವಾಸ ದಲ್ಲಿ ಭಾನುವಾರ ಸುದ್ದಿಗಾರ ರೊಂದಿಗೆ ಅವರು ಮಾತನಾಡಿ, ಅಂತರಘಟ್ಟೆ ಕಡೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು, ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದಲ್ಲಿ ಅತ್ಯಧಿಕ ವರಮಾನವಿ ದ್ದರೂ  ಅಗತ್ಯ ಮೂಲ ಸೌಕರ್ಯ ಗಳ ಕೊರತೆ ಇತ್ತು.

ಈ ಕುರಿತು ಮುಜ ರಾಯಿ ಸಚಿವ ರುದ್ರಪ್ಪ ಲಮಾಣಿ ಅವರ ಗಮನ ಸೆಳೆದಿದ್ದು, ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಸುಮಾರು ₹6 ಲಕ್ಷ ವೆಚ್ಚದಲ್ಲಿ ವಿದ್ಯುತ್‌ ದೀಪ, ಜನರೇಟರ್ ಮುಂತಾದ ಅಗತ್ಯ ಸೌಕರ್ಯಗಳಿಗಾಗಿ ಖರ್ಚು ಮಾಡಲಾಗಿದೆ ಎಂದರು.

ದಶಕಗಳಿಂದ ದುರ್ಗಾಂಬ ದೇವಿಯ ಉತ್ಸವ ಮೂರ್ತಿಗೆ ಧರಿಸುವ ಅಮೂಲ್ಯ ಆಭರಣಗಳನ್ನು ಹೊರ ತೆಗೆಯದೆ ಖಜಾನೆಯಲ್ಲಿಯೇ ಇರಿಸ ಲಾಗಿದ್ದು, ಅವುಗಳನ್ನು ಎಷ್ಟೋ ಜನ ನೋಡಿಯೇ ಇರಲಿಲ್ಲ. ಈ ಬಾರಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಖಜಾನೆಯಲ್ಲಿರುವ ಆಭರಣಗಳನ್ನು ಅಂತರಘಟ್ಟೆ ಗ್ರಾಮಸ್ಥರ ಸಮ್ಮುಖ ಪರಿಶೀಲಿಸಲು ತಹಶೀಲ್ದಾರ್ ಅವರಿಗೆ ಮನವಿ ಮಾಡಲಾಗಿದೆ.

ಗ್ರಾಮಸ್ಥರು ಮತ್ತು ದೇಗುಲದ ಧರ್ಮದರ್ಶಿ ಮಂಡಳಿ ಲಿಖಿತವಾಗಿ ಜವಾಬ್ದಾರಿ ಪತ್ರ ನೀಡಿದರೆ ಅಮೂಲ್ಯವಾದ ಆಭರಣ ಗಳನ್ನು ಉತ್ಸವ ಮೂರ್ತಿಗೆ ತೊಡಿಸಲಾಗುವುದು ಎಂದರು.

ಜಾತ್ರಾ ಮಹೋತ್ಸವದ ಪ್ರಯುಕ್ತ  ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಭಕ್ತಾದಿಗಳಿಗೆ ಅನುಕೂಲವಾಗುವಂತೆ ಜಾತ್ರೆಯ 3 ದಿನ 15 ಟ್ಯಾಂಕರ್ ಗಳಲ್ಲಿ ನಿರಂತರ ನೀರು ಪೂರೈಕೆ, 20 ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ  ವ್ಯವಸ್ಥೆ ಮಾಡಲಾಗಿದೆ.

ಇದಲ್ಲದೆ ₹1 ಕೋಟಿ ವೆಚ್ಚದಲ್ಲಿ ದೇಗುಲದ ಸುತ್ತ ನೆಲಹಾಸು, ಸರತಿ ಸಾಲಿಗೆ ನೆರಳು ಹಾಗೂ ಭಕ್ತಾದಿಗಳಿಗೆ ಅಡುಗೆ ಮಾಡಿ ಕೊಳ್ಳಲು ಸೌಕರ್ಯವಿರುವ ಅಡುಗೆ ಮನೆ ನಿರ್ಮಾಣಕ್ಕೆ ಟೆಂಡರ ಪ್ರಕ್ರಿಯೆ ಮುಗಿದಿದ್ದು ಶೀಘ್ರವೇ ಕಾಮಗಾರಿ ಅರಂಭಗೊಳ್ಳಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT