ADVERTISEMENT

ಅಂಬೇಡ್ಕರ್ ವಿಶ್ವವಿದ್ಯಾಲಯ ಇದ್ದಂತೆ

ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ಆಚರಣೆಯಲ್ಲಿ ಕೆ.ನಾಗರಾಜ್ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 7:29 IST
Last Updated 7 ಡಿಸೆಂಬರ್ 2017, 7:29 IST

ಮೂಡುಬಾಗಿಲು(ಎನ್.ಆರ್.ಪುರ): ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವವಿದ್ಯಾಲಯವಿದ್ದಂತೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ನಾಗರಾಜ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಬಾಗಿಲು ಶಾಲಾ ಆವರಣದಲ್ಲಿ ಬುಧವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಯುಕ್ತ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆ ಮತ್ತು ಬಾಳೆ, ಗುಬ್ಬಿ ಮತ್ತು ಕರ್ಕೇಶ್ವರ ಗ್ರಾಮ ಶಾಖೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

‘ಅಂಬೇಡ್ಕರ್ ದೊಡ್ಡ ಜ್ಞಾನಕೋಶವಿದ್ದಂತೆ. ಈ ದೇಶಕ್ಕೆ ವಲಸೆ ಬಂದ ಪುರೋಹಿತಶಾಹಿಗಳು ಇಲ್ಲಿನ ಮೂಲ ನಿವಾಸಿಗಳಿಗೆ ಶಿಕ್ಷಣ ನೀಡಲು ಅಡ್ಡಿಪಡಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ರಾಮಾಯಣ, ಮಹಾಭಾರತವನ್ನು ಅಧ್ಯಯನ ಮಾಡಿ ದಲಿತರಿಗೆ ಶಿಕ್ಷಣ ಪಡೆಯಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದರು’ ಎಂದು ಹೇಳಿದರು.

ADVERTISEMENT

ಡಿಎಸ್ಎಸ್ ನ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಶೋಷಿತ ಸಮುದಾಯವನ್ನು ರಾಜಕೀಯ ಶಕ್ತಿಯನ್ನಾಗಿ ರೂಪಿಸಲು ಅಂಬೇಡ್ಕರ್ ಶ್ರಮಿಸಿದರು. 42 ವರ್ಷಗಳಿಂದಲೂ ದಲಿತ ಸಂಘರ್ಷ ಸಮಿತಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ನಡೆಯುವ ದೌರ್ಜನ್ಯವನ್ನು ಖಂಡಿಸಿ ದಲಿತರಿಗೆ ರಕ್ಷಣೆ ನೀಡುವ ಕೆಲಸ ಮಾಡುತ್ತಿದೆ’ ಎಂದರು.

ತಾಲ್ಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಎ.ಸಿ.ಶ್ರೀನಿವಾಸ್ ಮಾತನಾಡಿ, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕಾನೂನು ಬದ್ಧವಾಗಿ ಸರ್ಕಾರದಿಂದ ಸಿಗಬೇಕಾದ ಮೂಲ ಸೌಕರ್ಯಗಳು ಸಿಗುತ್ತಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಪರಿಶಿಷ್ಟ ಜಾತಿಯವರಿಗೆ ಏನಾದರೂ ವಿಶೇಷ ಪ್ಯಾಕೇಜ್ ಘೋಷಣೆಯಾಗುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ಉಡುಪಿಯಲ್ಲಿ ನಡೆದ ಧರ್ಮ ಸಂಸತ್ ನಲ್ಲಿ ಪೇಜಾವರ ಸ್ವಾಮೀಜಿ ಸಂವಿಧಾನ ಬದಲಾಯಿಸಬೇಕು ಎಂದು ಹೇಳಿರುವುದನ್ನು ಖಂಡಿಸುತ್ತೇನೆ’ ಎಂದರು.
ಯುವಶಕ್ತಿ ಅಧ್ಯಕ್ಷ ನಾಗೇಶ್ ಮಾತನಾಡಿ, ತಾಲ್ಲೂಕಿನಲ್ಲಿ 20 ವರ್ಷಗಳಿಂದಲೂ ವಾಸವಾಗಿರುವ ಹಾವುಗೊಲ್ಲರಿಗೆ, ಬೋವಿ ಕಾಲೋನಿಯವರಿಗೆ ಹಕ್ಕು ಪತ್ರ ನೀಡ ಬೇಕೆಂದರು ಒತ್ತಾಯಿಸಿದರು.

ಕರ್ಕೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನುತಾಶ್ರೀನಿವಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು ವಹಿಸಿದ್ದರು. ಕರ್ಕೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಿನಕರ್ ಭಟ್, ಬಾಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್.ವಸಂತಕುಮಾರ್, ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ದಿನೇಶ್, ತಾಲ್ಲೂಕು ಸಂಘಟನಾ ಸಂಚಾಲಕ ಗಂಗಯ್ಯ, ಮುಖಂಡರಾದ ಕೆ.ಮಂಜುನಾಥ್, ಚೌಡಯ್ಯ, ಅವಿನಾಶ್, ದೊಡ್ಡಯ್ಯ, ಶ್ರೀನಿವಾಸ್, ನಾಗರಾಜ್, ಶಿವಕುಮಾರ್, ಎಂ.ಆರ್.ಸುಬ್ರಹ್ಮಣ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.