ADVERTISEMENT

‘ಗ್ರಾಮೀಣ ಸೊಗಡು ಮೈಗೂಡಿಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 5:40 IST
Last Updated 20 ಮಾರ್ಚ್ 2017, 5:40 IST

ಚಿಕ್ಕಮಗಳೂರು: ಆಧುನೀಕರಣದ ಭರದಲ್ಲಿ ಯುವಜನತೆ ತಮ್ಮ ತನವನ್ನು ಕಳೆದುಕೊಳ್ಳದೇ ಗ್ರಾಮೀಣ ಸೊಗಡು, ಜಾನಪದ ಸಂಸ್ಕೃತಿಯನ್ನು ಮೈಗೂಡಿಸಿ ಕೊಳ್ಳಬೇಕು ಎಂದು ವಿರಕ್ತಮಠ ಬಸವಮಂದಿರದ  ಜಯಬಸವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಬಸವ ಮಂದಿರದಲ್ಲಿ ಕನ್ನಡ ಜಾನಪದ ಪರಿಷತ್  ವತಿಯಿಂದ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಮಠದಿಂದ ಮಠಕ್ಕೆ ಜಾನಪದ ಕಾರ್ಯಕ್ರಮಕ್ಕೆ ಭಾನುವಾರ ಡಮರುಗ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಜಾಗತೀಕರಣ, ಆಧುನೀಕರಣ ಮತ್ತು ನೂತನ ತಂತ್ರಜ್ಞಾನದ ಭರಾಟೆಗೆ ಸಿಕ್ಕಿ ಇಂದು ಸಂಸ್ಕೃತಿಯ ತಾಯಿ ಬೇರಿನಂತಿರುವ ಜಾನಪದ ಕಲೆ ಮರೆ ಯಾಗುತ್ತಿದೆ, ಮೊಬೈಲ್, ಟಿ.ವಿ ಮತ್ತು ಕಂಪ್ಯೂಟರ್ ಲೋಕದಲ್ಲಿ ಮುಳುಗಿ, ಸಂಸ್ಕೃತಿ, ಸಂಸ್ಕಾರ ಹಾಗೂ ಸಂಪ್ರದಾ ಯವನ್ನು ಕಳೆದು ಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು.

ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ವಾದ ಸಂಸ್ಕೃತಿ ಎಂದರೆ ಅದು ನಮ್ಮ ಜಾನಪದ ಸಂಸ್ಕೃತಿ. ಕನ್ನಡ ಸಾಹಿತ್ಯ ಕ್ಕಿಂತ ಮೊದಲು ಜಾನಪದ ಸಾಹಿತ್ಯ ವಿತ್ತು. ನಂತರದ ದಿನಗಳಲ್ಲಿ ವಚನ ಸಾಹಿತ್ಯದ ಉಗಮವಾಯಿತು, ಜನಪದ ಎನ್ನುವುದು ಹೃದಯದ ಭಾಷೆಯಾ ಗಿದ್ದು, ಪುರಾತನ ಜಾನಪದ ಸಂಸ್ಕೃತಿ ಯನ್ನು ಇಂದಿನ ಯುವಪೀಳಿಗೆ ಯಾವುದೇ ಕಾರಣಕ್ಕೂ ಕಡೆಗಣಿಸದೇ ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಹೇಳಿದರು.

ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಬಾಲಾಜಿ ಮಾತನಾಡಿ, ಜಾನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಉದ್ದೇಶದಿಂದ ಮಠದಿಂದ ಮಠಕ್ಕೆ ಜಾನಪದ ಕಾರ್ಯಕ್ರಮವನ್ನು ಆರಂಭಿ ಸಿದ್ದು, ರಾಜ್ಯದ ಎಲ್ಲ  ಮಠಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.

ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್  ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದ ನಡುವೆ ನಡೆದ ಗೊರವರ ಕುಣಿತ ಹಾಗೂ ಜಾನಪದ ಗಾಯನ ಗಮನ ಸೆಳೆಯಿತು.

ವಿಜಯಪುರ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಬಾಳನಗೌಡ ಪಾಟೀಲ್, ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಮಂಜುನಾಥ ಭಕ್ಕಿ, ಕಡೂರು ತಾಲ್ಲೂಕು ಅಧ್ಯಕ್ಷ ಕುಪ್ಪಾಳು ಶಾಂತ ಮೂರ್ತಿ, ಶಿಕ್ಷಕ ಚಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.