ಕೊಪ್ಪ: ತಾಲ್ಲೂಕಿನ ನಿಲುವಾಗಿಲು ಪಂಚಾಯಿತಿ ವ್ಯಾಪ್ತಿಯ ಯಡ್ತಾಳು ಸೈಟ್ ಬಳಿ ನಿರ್ಮಿಸಿರುವ ಚರಂಡಿ ತಡೆಗೋಡೆ 2 ದಿನಗಳ ಹಿಂದೆ ಸುರಿದ ಮಳೆಗೆ ಜರಿದು ಬಿದ್ದಿದ್ದು, ಇದಕ್ಕೆ ಕಳಪೆ ಕಾಮಗಾರಿಯೇ ಕಾರಣವೆಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
‘ಪಂಚಾಯಿತಿಯ ಈಗಿನ ಅಧ್ಯಕ್ಷರು 9 ತಿಂಗಳ ಹಿಂದೆ ಸದಸ್ಯರಾಗಿದ್ದಾಗ ಹರಿಹರಪುರದ ಗುತ್ತಿಗೆದಾರರೊಬ್ಬರ ಹೆಸರಲ್ಲಿ ಬೇನಾಮಿ ಗುತ್ತಿಗೆ ವಹಿಸಿಕೊಂಡು ನಿರ್ಮಿಸಿದ ಚರಂಡಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಹಲವು ಕಡೆ ಈ ರೀತಿ ಕಳಪೆ ಕಾಮಗಾರಿ ನಡೆಸಿ ಪಂಚಾಯಿತಿ ಹಣ ಲೂಟಿ ಮಾಡಲಾಗಿದೆ. ಇದರ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು’ ಎಂದು ಆಗ್ರಹಿಸಿದರು.
ಹರಿಹರಪುರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಬೆಳಾಲೆ ಈಶ್ವರ್ ಮಾತನಾಡಿ, ‘ಕಾಮಗಾರಿ ಗುತ್ತಿಗೆಯನ್ನು ಸ್ಥಳೀಯರಿಗೆ ನೀಡದೆ ಹೊರಗಿನವರಿಗೆ ನೀಡಿರುವುದು ಅನುಮಾನಕ್ಕೆಡೆಯಾಗಿದೆ’ ಎಂದರು.
ಸ್ಥಳಕ್ಕೆ ಬಂದ ಪಂಚಾಯಿತಿ ಪಿಡಿಒ ರಾಮಪ್ಪ ಮಾತನಾಡಿ, ‘14ನೇ ಹಣಕಾಸು ನಿಧಿಯಲ್ಲಿ ₹50 ಲಕ್ಷ ವೆಚ್ಚದಲ್ಲಿ ಚರಂಡಿ ಕಾಮಗಾರಿ ನಡೆಸಿದ್ದು, ಕಾಮಗಾರಿ ಕಳಪೆಯಾಗಿ ಚರಂಡಿ ತಡೆಗೋಡೆ ಜರಿದು ಬಿದ್ದಿರುವ ಬಗ್ಗೆ ಗುತ್ತಿಗೆದಾರರ ಗಮನಕ್ಕೆ ತಂದಿದ್ದು, 2-3 ದಿನಗಳಲ್ಲಿ ದುರಸ್ತಿಪಡಿಸಿಸಲಾಗುವುದು. ಇಲ್ಲದಿದ್ದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ₹ 50 ಸಾವಿರ ವೆಚ್ಚದಲ್ಲಿ ಮುಂದುವರೆದ ಕಾಮಗಾರಿ ನಡೆಸಲು ಪಂಚಾಯಿತಿ ತೀರ್ಮಾನಿಸಿದೆ’ ಎಂದರು.
ಪಂಚಾಯಿತಿ ಸದಸ್ಯ ಕೆ.ಟಿ.ಮಿತ್ರ, ಕೊಪ್ಪ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎನ್.ಕೆ.ವಿಜಯ್, ನಿರ್ದೇಶಕ ಎಚ್.ಎಸ್. ಇನೇಶ್, ಮಾಕಾರು ಶ್ರೀಕಾಂತ್, ಪದ್ಮನಾಭ, ಅಶೋಕ್, ತನಿಕೋಡು ರಾಘವೇಂದ್ರ, ಇಳಿಕೆರೆ ಅರುಣ, ಮೇಲ್ಬಿಕ್ಕಳಿ ಹರರೀಶ್, ಆತ್ರೊಳ್ಳಿ ನಾಗೇಶ್, ಕವೀಶ್, ಜನಾರ್ಧನ್, ಯಡ್ತಾಳ್ ತುಕ್ರ, ಶಿವರಾಂ, ಶ್ರೀನಿವಾಸ್, ಸೀನಯ್ಯ, ಶಂಕ್ರ, ನರಸಿಂಹ, ನಾಗರಾಜ್ ಜಗದೀಶ್ ಶಾನುವಳ್ಳಿ ಇದ್ದರು.
**
ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಬೆಳಾಲೆ ಈಶ್ವರ್ , ಹರಿಹರಪುರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.