ಮೂಡಿಗೆರೆ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 234 ರ ಚಾರ್ಮಾಡಿಘಾಟಿ ರಸ್ತೆಯಲ್ಲಿ ಸಂಚರಿಸುತ್ತಿರುವ ಘನ ವಾಹಗಳಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ಭಾನುವಾರ ಮಧ್ಯಾಹ್ನ ವೇಳೆಯೇ ಘಾಟಿಯ 2ನೇ ತಿರುವಿನಲ್ಲಿ ಘನವಾಹನ ವೊಂದು ತಿರುಗಲಾಗದೇ ಅರ್ಧ ಗಂಟೆಗೂ ಅಧಿಕ ಕಾಲ ಹೆದ್ದಾರಿ ಸಂಚಾರ ಸ್ಥಗಿತವಾಗಿತ್ತು. ಕೊಟ್ಟಿಗೆಹಾರದ ಕಡೆಯಿಂದ ಬಂದಿದ್ದ ವಾಹನವು ತಿರುವಿನಲ್ಲಿ ಸಿಲುಕಿಕೊಂಡಿದ್ದು, ಹಿಂದೆ, ಮುಂದೆ ಮಾಡಿ ವಾಹನವನ್ನು ಬದಿಗೆ ತೆಗೆದುಕೊಳ್ಳುವಷ್ಟರಲ್ಲಿ ಅರ್ಧ ಕಿ.ಮೀ. ಗೂ ಅಧಿಕ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಕಿರಿದಾಗಿರುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಘನ ವಾಹನಗಳು ಚಲಿಸಬಾರದು ಎಂದು ಜಿಲ್ಲಾಧಿಕಾರಿಗಳ ಆದೇಶವಿದ್ದರೂ, ಎಗ್ಗಿಲ್ಲದೇ ಚಲಿಸುತ್ತಿರುವುದರಿಂದ, ಪದೇ ಪದೇ ಸಂಚಾರ ಸ್ಥಗಿತವಾಗು ತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಕಳೆದ ವಾರ ಘನ ವಾಹಗಳ ಸಂಚಾರ ಕುರಿತು ಲೇಖನ ಪ್ರಕಟಗೊಂಡ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಘನ ವಾಹನಗಳ ಸಂಚಾರವನ್ನು ತಡೆಹಿಡಿಯಲಾಗಿತ್ತು. ಆದರೆ ಭಾನುವಾರ ಪುನಃ ಅಧಿಕ ಲೋಡ್ ಆದ ಹುಲ್ಲಿನ ಲಾರಿಗಳು ಸಂಚಾರ ಪ್ರಾರಂಭಿಸಿದ್ದು, ಹೆದ್ದಾರಿಯಲ್ಲಿ ಸಂಚರಿಸುವುದು ಕಷ್ಟವಾಗಿದೆ.
ವಾರಂತ್ಯವಾಗಿದ್ದರಿಂದ ಹೆದ್ದಾರಿ ಯಲ್ಲಿ ವಾಹನ ಸಂಚಾರ ದಟ್ಟಣೆಯಿಂದ ಕೂಡಿದ್ದು, ವಾಹನ ಸವಾರರು ಪರದಾಡುತ್ತಿದ್ದ ದೃಶ್ಯ ಕಂಡು ಬಂದಿತು.
ಹೆದ್ದಾರಿಯಲ್ಲಿ ಕೂಡಲೇ ಘನ ವಾಹನಗಳು ಹಾಗೂ ಹುಲ್ಲಿನ ಲಾರಿಗಳ ಸಂಚಾರವನ್ನು ತಡೆದು, ವಾಹನ ಸವಾರರಿಗಾಗುತ್ತಿರುವ ಸಮಸ್ಯೆಯನ್ನು ಪರಿಹರಿಸಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.