ADVERTISEMENT

ರಾಜ್ಯದಲ್ಲಿ 42 ಸಿಬ್ಬಂದಿ ಹುತಾತ್ಮ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 8:49 IST
Last Updated 12 ಸೆಪ್ಟೆಂಬರ್ 2017, 8:49 IST
ನರಸಿಂಹರಾಜಪುರದ ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ರವಿ ನಿಡಘಟ್ಟ ಮಾತನಾಡಿದರು.
ನರಸಿಂಹರಾಜಪುರದ ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ರವಿ ನಿಡಘಟ್ಟ ಮಾತನಾಡಿದರು.   

ನರಸಿಂಹರಾಜಪುರ: ಹುತಾತ್ಮರಾದ ಹಾಗೂ ನಿವೃತ್ತಿ ಹೊಂದಿದ ಅರಣ್ಯ ಇಲಾಖೆಯ ನೌಕರರ ಕುಟುಂಬದವರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಹಾಯ ಹಸ್ತ ಚಾಚಬೇಕು ಎಂದು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರವಿ ನಿಡಘಟ್ಟ ತಿಳಿಸಿದರು.

ಇಲ್ಲಿನ ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಕಚೇರಿಯ ಆವರಣದಲ್ಲಿ ಕೊಪ್ಪ, ಎನ್.ಆರ್.ಪುರ, ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿಗಳ ಸಹಯೋಗದಲ್ಲಿ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಉದ್ಘಾಟನಾ ಸಮಾರಂಭದಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅರಣ್ಯ ಇಲಾಖೆಯ ಅನೇಕ ನೌಕರರು ವೃತ್ತಿ ಮಾಡುವಾಗಲೇ ಹುತಾತ್ಮರಾಗುತ್ತಾರೆ. ಕೆಲವರು ನಿವೃತ್ತಿ ನಂತರ ಆರ್ಥಿಕ ಸಂಕಷ್ಟ ಎದುರಿಸುತ್ತಾರೆ. ಅಂತವರನ್ನು ಸಹಾನುಭೂತಿಯಿಂದ ನೋಡಿಕೊಳ್ಳಬೇಕು. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವಾಗ ಒತ್ತಡಕ್ಕೆ ಒಳಗಾಗದೆ ಶಾಂತವಾಗಿ ಕೆಲಸ ಮಾಡಿದರೆ ಅರಣ್ಯ ಅಭಿವೃದ್ಧಿಯಲ್ಲಿ ಇನ್ನಷ್ಟು ಕೆಲಸ ಮಾಡಲು ಸಹಕಾರಿಯಾಗಲಿದೆ ಎಂದರು.

ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಮೋಹನ್‌ಕುಮಾರ್ ಮಾತನಾಡಿ, ‘ಪ್ರತಿವರ್ಷ ಅರಣ್ಯಇಲಾಖೆಯು ನ. 11ರಂದು ಹುತಾತ್ಮರ ದಿನಾಚರಣೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ದೇಶದಾದ್ಯಂತ ಸೆ. 11 ರಂದು ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ 42 ಅರಣ್ಯ ಇಲಾಖೆಯ ಸಿಬ್ಬಂದಿ ಹುತಾತ್ಮರಾಗಿದ್ದಾರೆ, ಮುಂದಿನ ಪೀಳಿಗೆಗೆ ಪರಿಸೆ ಉಳಿಸಲು ಅರಣ್ಯ ಇಲಾಖೆಯು ಶ್ರಮಿಸುತ್ತಿದೆ’ ಎಂದರು.

ADVERTISEMENT

ನಾಟ ಂಗ್ರಹಾಲಯದ ವಲಯ ಅರಣ್ಯಾಧಿಕಾರಿ ಲಾರೆನ್ಸ್ ಮಾತನಾಡಿ, ‘ಕೆಲವು ವರ್ಷಗಳ ಹಿಂದೆ ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯಲ್ಲಿ ಶ್ರೀನಿವಾಸ್ ಎಂಬ ಅರಣ್ಯ ಅಧಿಕಾರಿ ಹುತಾತ್ಮರಾಗಿದ್ದರು. ಅಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಆಧುನಿಕ ಸೌಲಭ್ಯವಿಲ್ಲದೆ ಹಗಲು, ರಾತ್ರಿ ಅರಣ್ಯ ಸಂರಕ್ಷಣೆ ಮಾಡಿದ್ದರು. ಚಿಕ್ಕಮಗಳೂರು ಜಿಲ್ಲೆಯು ದಟ್ಟ ಅರಣ್ಯದಿಂದಾಗಿ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಈ ಜಿಲ್ಲೆಯ ಅರಣ್ಯಾಧಿಕಾರಿಗಳು ಅರಣ್ಯವನ್ನು ಸಂರಕ್ಷಣೆ ಮಾಡಿದ್ದರಿಂದ ಇಂದು ಅರಣ್ಯ ಬೆಳೆಯಲು ಕಾರಣವಾಗಿದೆ’ ಎಂದರು.

ಶಿವಮೊಗ್ಗ ರೋಟರಿ ರಕ್ತ ನಿಧಿ ಕೇಂದ್ರದ ಅಧಿಕಾರಿ ಡಾ.ವಿವೇಕಹೆಬ್ಬಾರ್ ಮಾತನಾಡಿ, ‘ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ರಕ್ತವನ್ನು ಶೇಖರಣೆ ಮಾಡಿದ ನಂತರ ವರ್ಗೀಕರಣ ಮಾಡಲಾಗುತ್ತದೆ. ಅಗತ್ಯವಿರುವ ರೋಗಿಗಳಿಗೆ ಬೇಕಾದ ಗುಂಪಿನ ರಕ್ತವನ್ನು ನೀಡಲಾಗುತ್ತದೆ. ರಕ್ತ ನೀಡುವ ದಾನಿಗಳು ದೇವರಿಗೆ ಸಮಾನ, ಪ್ರತಿಯೊಬ್ಬರು 350 ಎಂ.ಎಲ್ ರಕ್ತ ನೀಡಿದರೆ ಇಬ್ಬರ ಜೀವ ಉಳಿಸಬಹುದು’ ಎಂದರು.

ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಸತೀಶ್‌ಕುಮಾರ್, ಗೌಸ್ ಮೊಹಿದ್ದೀನ್ ಪಾಲ್ಗೊಂಡಿದ್ದರು. ಹುತಾತ್ಮರಾದ ಅರಣ್ಯ ಸಿಬ್ಬಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಮೌನಾಚರಣೆ ಮಾಡಿ ಗೌರವ ಸಲ್ಲಿಸಿದರು. ವೀರಪ್ಪನ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಅರಣ್ಯ ಅಧಿಕಾರಿ ಶ್ರೀನಿವಾಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ರಕ್ತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.