ADVERTISEMENT

ವಿಜೃಂಭಣೆಯ ಬ್ರಹ್ಮ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 10:16 IST
Last Updated 13 ಜನವರಿ 2017, 10:16 IST
ವಿಜೃಂಭಣೆಯ ಬ್ರಹ್ಮ ರಥೋತ್ಸವ
ವಿಜೃಂಭಣೆಯ ಬ್ರಹ್ಮ ರಥೋತ್ಸವ   
ಗೌರಿಬಿದನೂರು: ತಾಲ್ಲೂಕಿನ ಅಲಕಾಪುರ ಗ್ರಾಮದ ಚನ್ನಸೋಮೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.
 
ಹದಿನೈದು ದಿನಗಳಿಂದ ಬ್ರಹ್ಮ ರಥೋತ್ಸವದ ಅಂಗವಾಗಿ ಸೀತಾ ರಾಮ ಕಲ್ಯಾಣೋತ್ಸವ, ಹೋಮ, ಹವನ, ಗಂಧೋತ್ಸವ ಇತರೆ ಧಾರ್ಮಿ ಕೈಂಕರ್ಯಗಳನ್ನು ಏರ್ಪಡಿಸಲಾಗಿತ್ತು. 
 
ಚನ್ನಸೋಮೇಶ್ವರ ಸ್ವಾಮಿಯ ದೇವರ ಉತ್ಸವ ಮೂರ್ತಿಗಳನ್ನು ಮಂಗಳ ವಾದ್ಯಗಳೊಂದಿಗೆ ತಂದು ವಿಶೇಷವಾಗಿ ಅಲಂಕರಿಸಿದ್ದ ರಥದಲ್ಲಿ ಕುಳ್ಳರಿಸಿ ಪೂಜೆ ನೆರವೇರಿಸಿದ ನಂತರ ರಥವನ್ನು ಎಳೆಯಲಾಯಿತು.
 
ಭಕ್ತರು ಬಾಳೆಹಣ್ಣು ಮತ್ತು ದವನಗಳನ್ನು ರಥದ ಮೇಲೆ ಎಸೆದು ಹರಕೆ ತೀರಿಸಿಕೊಂಡರು. ಬೆಳಿಗ್ಗೆಯಿಂದಲೇ ದೇಗುಲಕ್ಕೆ ಬಂದ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರುಶನ ಪಡೆದರು. 
 
ರಥೋತ್ಸವಕ್ಕೂ ಮುನ್ನ ಅಲಕಾಪುರ ಗ್ರಾಮದ ಮಹಿಳೆಯರು ಹಸಿ ತಂಬಿಟ್ಟಿನಿಂದ ತಯಾರಿಸಿದ್ದ ದೀಪಗಳನ್ನು ಹೊತ್ತು ಜನಪದ ಕಲಾ ತಂಡಗಳೊಂದಿಗೆ ಗ್ರಾಮದಿಂದ ದೇಗುಲದವರೆಗೂ ಮೆರವಣಿಗೆಯಲ್ಲಿ ತೆರಳಿ ಚನ್ನಸೋಮೇಶ್ವರ ಸ್ವಾಮಿಗೆ ದೀಪಗಳನ್ನು ಬೆಳಗಿದರು. ಸಂಜೆಯಾದರು ಸಹ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಜನ ದೇಗುಲಕ್ಕೆ ಹೋಗಿ ಪೂಜೆ ಸಲ್ಲಿಸಕೊಂಡು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
 
ಜಾತ್ರೆಯಲ್ಲಿ ಮಹಿಳೆಯರು ಗೃಹೋಪಯೋಗಿ ವಸ್ತುಗಳನ್ನು ಕೊಂಡರೆ, ಮಕ್ಕಳು ವಿವಿಧ ಬಣ್ಣ ಬಣ್ಣದ ಆಟಿಕೆಗಳನ್ನು ಕೊಳ್ಳುತ್ತಿದಿದ್ದು ಕಂಡು ಬಂತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.