ಚಿಕ್ಕಮಗಳೂರು: ನಗರದ ಜಿಲ್ಲಾಸ್ಪತ್ರೆಯ ಶೌಚಾಲಯದ ನಲ್ಲಿಯಲ್ಲಿ ನೀರು ಬಾರದಿರುವುದು ಮತ್ತು ಅಲ್ಲಿನ ಬಕೆಟ್ನಲ್ಲಿಯೂ ನೀರು ಇಲ್ಲದಿ ರುವುದನ್ನು ಕಂಡು ಜಿಲ್ಲಾ ಉಸ್ತುವಾರಿ ಸಚಿವ ಆರ್.ರೋಷನ್ ಬೇಗ್ ಅವಾಕ್ಕಾದರು.
ಜಿಲ್ಲಾಸ್ಪತ್ರೆಗೆ ಗುರುವಾರ ದಿಢೀರ್ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದ ಅವರು ಶೌಚಾಲಯದಲ್ಲಿ ನೀರು ಪೂರೈಕೆ ಇಲ್ಲದಿರುವುದನ್ನು ನೋಡಿ ಗಾಬರಿಯಾದರು.
ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸ ಬೇಕಾದ ಆಸ್ಪತ್ರೆಯಲ್ಲೇ ಶೌಚಾಲಯದ ಸ್ಥಿತಿಯನ್ನು ಕಂಡು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಶೌಚಾಲಯದೊಳಕ್ಕೆ ತೆರಳಿದ ಸಚಿವರು ನಲ್ಲಿಯ ಟ್ಯಾಪ್ ತಿರುಗಿಸಿ, ‘ಏನ್ರಿ ಇದು, ನೀರು ಬರ್ತಾ ಇಲ್ಲ...’ ಎಂದು ಪ್ರಶ್ನಿಸಿದರು. ‘ಸರ್, ನಲ್ಲಿಯಲ್ಲಿ ನೀರು ಬರಲ್ಲ, ಬಕೆಟ್ನಲ್ಲಿ ಇದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದೊಡ್ಡಮಲ್ಲಪ್ಪ ಉತ್ತರಿಸಿದರು.
‘ಬಕೆಟ್ನಲ್ಲಿ ಎಲ್ಲಿದೆ ನೀರು, ಖಾಲಿ ಇರೋದು ಕಾಣಿಸ್ತಾ ಇಲ್ವಾ’ ಎಂದು ಸಚಿವರು ಬಕೆಟನ್ನೇ ಎತ್ತಿ ತೋರಿಸಿದರು. ಪಕ್ಕದ ಶೌಚಾಲಯದೊಳಗಿಂದ ಬಂದ ವ್ಯಕ್ತಿಯೊಬ್ಬರನ್ನು ಪ್ರಶ್ನಿಸಿದ ಸಚಿವರು, ‘ಏನಪ್ಪಾ ಅಲ್ಲಿ ನೀರು ಬರ್ತಾ ಇದೆಯಾ..’ ಎಂದು ಕೇಳಿದರು. ಆ ವ್ಯಕ್ತಿ,‘ಅಲ್ಲಿಯೂ ಬರ್ತಾ ಇಲ್ಲ ಸಾರ್’ ಎಂದರು. ಸಿಡಿಮಿಡಿಗೊಂಡ ರೋಷನ್ ಬೇಗ್ ಅವರು, ಶೌಚಾಲಯದ ಅವ್ಯವಸ್ಥೆಯನ್ನು ತಕ್ಷಣವೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.