ADVERTISEMENT

‘ಸಮಾಜದ ಅಭ್ಯುದಯವೇ ಕಲ್ಯಾಣ’

ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 6:20 IST
Last Updated 3 ಸೆಪ್ಟೆಂಬರ್ 2015, 6:20 IST

ಅಜ್ಜಂಪುರ: ಕಲ್ಯಾಣ ಎನ್ನುವುದು ಸ್ಥಳವಾಚಕವಾಗಲೀ, ಮುಟ್ಟಬಹುದಾದ ಗುರಿಯಾಗಲೀ ಅಲ್ಲ. ಬದಲಿಗೆ ಅಭ್ಯುದಯ, ಮಂಗಳ, ಶುಭ, ಒಳಿತು ಎಂದರ್ಥ. ಇದು ಶರಣರು ಕಟ್ಟ ಬಯಸಿದ ವ್ಯಕ್ತಿ ಕಲ್ಯಾಣ, ಲೋಕ ಕಲ್ಯಾಣವನ್ನು ಮತ್ತೆ ಕಟ್ಟುವುದೇ–ಮತ್ತೆ ಕಲ್ಯಾಣ ಎಂದು ಸಾಣೇಹಳ್ಳಿಯ ತರಳ ಬಾಳು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣ ಸಮೀಪದ ಕುಡ್ಲೂರು ಗ್ರಾಮದಲ್ಲಿ ಬುಧವಾರ ನಡೆದ ಶ್ರಾವಣ ಸಂಜೆ–ವಚನಕಾರರ ತಾತ್ವಿಕ ಚಿಂತನಾ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸರಿಯಾದ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವುದೇ ಕಲ್ಯಾಣ. ವ್ಯಕ್ತಿ ಹಾಗೂ ಸಮಾಜದ ನಾಡಿನ ಅಭ್ಯುದಯವೇ ಕಲ್ಯಾಣ. ವ್ಯಕ್ತಿ ಒಳ–ಹೊರಗೆ ಅಂದರೆ ಅಂತರಂಗ ಮತ್ತು ಬಹಿರಂಗವಾಗಿ ಒಂದಾಗದವರೆಗೆ ವ್ಯಕ್ತಿಯ ಕಲ್ಯಾಣ ಸಾಧ್ಯವಿಲ್ಲ. ಹಿಂದೆ ಕಲ್ಯಾಣವನ್ನು ನಮ್ಮ ಹಿರಿಯರು ಹೇಗೆ ಸಾಧಿಸಿದ್ದರು? ಅದು ಯಾವಾಗ ನಿಂತು ಹೋಯಿತು? ಏಕೆ ನಿಂತು ಹೋಯಿತು? ಹೇಗೆ ಮುಂದು ವರೆಸಬೇಕು? ಎನ್ನುವುದನ್ನು ಚಿಂತನೆಗೆ ಒಳಪಡಿಸಬೇಕಾದ ಸಂದರ್ಭ ಇಂದು ಒದಗಿ ಬಂದಿದೆ ಎಂದರು.  

ಬಸವಣ್ಣನವರು ಸಮಾಜ ಕಲ್ಯಾಣಕ್ಕಾಗಿ ದೇವಾಲಯಕ್ಕೆ ಹೋಗುವ ಬದಲಿಗೆ ಗುಡಿಯಲ್ಲಿನ ದೇವರನ್ನೇ ಇಷ್ಠಲಿಂಗ ರೂಪದಲ್ಲಿ ಎಲ್ಲರೂ ಅಂಗದ ಮೇಲೆ ಧರಿಸುವ ಹೊಸ ಪದ್ಧತಿಯನ್ನೇ ಆರಂಭಿಸಿದರು. ಆ ಮೂಲಕ ಜಾತಿ, ಲಿಂಗಬೇಧವನ್ನು ಕೊನೆಗಾಣಿಸಿ ಸರ್ವರೂ ಸಮಾನವಾದ ಕಲ್ಯಾಣ ನಾಡೊಂದ ಕಟ್ಟಿದ್ದರು ಎಂದರು.

ಶಾಸಕ ಜಿ.ಎಚ್‌.ಶ್ರೀನಿವಾಸ್‌, ಮಾಜಿ ಶಾಸಕ ಡಿ.ಎಸ್‌.ಸುರೇಶ್‌, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್‌.ಆನಂದಪ್ಪ, ಮುಖಂಡ ದೋರನಾಳ್‌ ಪರಮೇಶ್‌, ದೃವಕುಮಾರ್‌, ವೀರಶೈವ ಸಮಾಜ ತಾಲ್ಲೂಕು ಅಧ್ಯಕ್ಷ ಶಂಕರಲಿಂಗಪ್ಪ, ಮಠದ ಸಲಹೆಗಾರ ಎ.ಸಿ.ಚಂದ್ರಪ್ಪ, ಶಿಕ್ಷಕ ದ್ಯಾಮೇಶ್‌, ಗಂಗಾಧರಪ್ಪ ಮತ್ತಿತರರಿದ್ದರು.

ಯುಗ ಕಂಡ ಶ್ರೇಷ್ಠ ನೇತಾರ ಬಸವಣ್ಣನವರು ಎಲ್ಲರಿಗೂ ಸಮಾನವಾಗಿ ಧರ್ಮದ ಬಾಗಿಲು ತೆರೆಯುವ ಮೂಲಕ ಹೊಸ ಸಮಾಜ ನಿರ್ಮಾಣಕ್ಕೆ ಮೊದಲ ಹೆಜ್ಜೆ ಇರಿಸಿದರು.
ಬಿ.ಎಲ್‌.ಶಂಕರ್,
ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.