ಚಿಕ್ಕಮಗಳೂರು: ಇದೇ 28 ರಂದು ಪಲ್ಸ್ ಪೋಲಿಯೊ ಅಭಿಯಾನ ನಡೆಯಲಿದೆ. ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಸೂಚಿಸಿದರು.
ಬುಧವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಗರಸಭೆ, ಪಟ್ಟಣಪಂಚಾಯಿತಿ, ಪುರಸಭೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಸಿ, ಕರಪತ್ರ ಹಂಚಿ ಪ್ರಚಾರ ಮಾಡಬೇಕು. ಸಂತೆ, ಜಾತ್ರೆ, ರೈಲು ನಿಲ್ದಾಣ, ಬಸ್ ನಿಲ್ದಾಣ, ಕೊಳೆಗೇರಿ ಪ್ರದೇಶ, ಅಲ್ಪಸಂಖ್ಯಾತರ ಬಡಾವಣೆಗಳಲ್ಲಿ ಪಲ್ಸ್ ಪೋಲಿಯೊ ಲಸಿಕಾ ಕೇಂದ್ರ ತೆರಯಬೇಕು. ಲಯನ್ಸ್, ರೋಟರಿ ಸಂಸ್ಥೆ ಗಳ ಸಹಯೋಗ ಪಡೆದುಕೊಳ್ಳಬೇಕು ಎಂದರು.
ಕೇಂದ್ರಗಳಲ್ಲಿ ಹಿಂದಿನ ದಿನವೇ ಲಸಿಕೆ ದಾಸ್ತಾನು ಮಾಡಬೇಕು. ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಘಟಕ ಇರಬೇಕು. ಕೇಂದ್ರಗಳಿಗೆ ಸಿಬ್ಬಂದಿ ತೆರಳಲು ಶಾಲಾ ವಾಹನ ಬಳಕೆ ಮಾಡಬೇಕು. 10 ಕೇಂದ್ರಗಳಿಗೆ ಒಂದರಂತೆ ವಾಹನ ನಿಯೋಜಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿ, 'ಜಿಲ್ಲೆಯಲ್ಲಿ 97,682 ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಗುರಿ ಇದೆ. ಜಿಲ್ಲಾದ್ಯಂತ 857 ಕೇಂದ್ರ ತೆರೆಯಲಾಗುವುದು. 1,912 ತಂಡಗಳು ಕಾರ್ಯನಿರ್ವಹಿಸಲಿವೆ' ಎಂದು ಹೇಳಿದರು.
ಫೆ.12ರಂದು ಜಂತುಹುಳು ನಿವಾರಣೆ ದಿನದ ಅಂಗವಾಗಿ ಒಂದರಿಂದ19 ವರ್ಷದವರಿಗೆ ಶಾಲಾಕಾಲೇಜು, ವಿದ್ಯಾರ್ಥಿನಿಲಯಗಳಲ್ಲಿ ಜಂತುಹುಳು ನಿವಾರಣೆ ಮಾತ್ರೆ ನೀಡಲಾಗುವುದು. ಮಾತ್ರೆಯನ್ನು ಚೀಪಿ, ಅಗಿದು ನುಂಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಲೋಕೇಶ್, ರೋಟರಿ ಸಂಸ್ಥೆ ಮುಖಂಡ ಅನಂತೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.