ಮೂಡಿಗೆರೆ: ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಹೊಕ್ಕಳ್ಳಿ ಕಬ್ಬಿನಗದ್ದೆಯಲ್ಲಿ ಕೃಷಿ ಹೊಂಡಕ್ಕೆ ಬಿದ್ದಿದ್ದ ಪ್ಲಾಸ್ಟಿಕ್ ಕ್ಯಾನ್ ತೆಗೆಯಲು ಹೋದ ಇಬ್ಬರು ನೀರುಪಾಲಾಗಿ ಮೃತಪಟ್ಟಿದ್ದಾರೆ.
ಕಬ್ಬಿನಗದ್ದೆ ಗ್ರಾಮದ ಕೃಷ್ಣಯ್ಯ ಅವರ ಪುತ್ರನಾದ ರಮೇಶ (30) ಹಾಗೂ ಮೊಮ್ಮಗ ಸಂದೇಶ್ (14) ಮೃತರು. ಗ್ರಾಮದ ಶ್ರೀಪತಿ ಎಂಬುವವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ನ ಬಳಿಗೆ, ರಮೇಶನ ಸೋದರಿಯ ಮಗನಾದ ಶನಿವಾರ ಮಧ್ಯಾಹ್ನದ ಸಂದೇಶ್ ತೆರಳಿದ್ದು, ಈ ವೇಳೆ ಕಾಫಿ ತೋಟದಲ್ಲಿದ್ದ ಕೃಷಿ ಹೊಂಡದಲ್ಲಿ ಪ್ಲಾಸ್ಟಿಕ್ ಕ್ಯಾನೊಂದು ತೇಲಾಡುತ್ತಿದ್ದು, ಅದನ್ನು ತೆಗೆಯಲು ಯತ್ನಿಸಿದ ಸಂದೇಶ್ ನೀರಿಗೆ ಬಿದ್ದಿದ್ದಾನೆ. ಇದನ್ನು ಕಂಡ ರಮೇಶ್ ಕೂಡ ನೀರಿಗಿಳಿದಿದ್ದು, ಈಜಲಾಗದೆ ಮೃತಪಟ್ಟಿದ್ದಾರೆ.
ಶನಿವಾರ ತಡರಾತ್ರಿಯಾದರೂ ರಮೇಶ್ ಹಾಗೂ ಸಂದೇಶ್ ಮನೆಗೆ ಬಾರದ್ದನ್ನು ಗಮನಿಸಿದ ಮನೆಯವರು ಭಾನುವಾರ ಮುಂಜಾನೆಯಿಂದಲೇ ಹುಡುಕಾಟ ನಡೆಸಿದ್ದು, ಕೃಷಿ ಹೊಂಡದ ಬಳಿ ರಮೇಶನ ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿದ್ದನ್ನು ಗಮನಿಸಿ, ಬಣಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಕೃಷಿ ಹೊಂಡದೊಳಗೆ ಹುಡುಕಾಟ ನಡೆಸಿದಾಗ, ಇಬ್ಬರ ಶವಗಳು ಪತ್ತೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ರಮೇಶ್ ತಂದೆ ಕೃಷ್ಣಯ್ಯ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.