ಚಿತ್ರದುರ್ಗ: ‘ಗಣೇಶ ಚತುರ್ಥಿ ಹಬ್ಬದ ಆಚರಣೆ ಮೂಲಕ ಸಮಾಜದಲ್ಲಿ ಪರಿಸರ ಜಾಗೃತಿ ಮತ್ತು ಸದ್ಭಾವನೆ ಕುರಿತು ಅರಿವು ಮೂಡಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್.ದಿಂಡಲಕೊಪ್ಪ ಸಲಹೆ ನೀಡಿದರು. ನಗರದ ಕೆಳಗೋಟೆಯ ಚನ್ನಕೇಶವಸ್ವಾಮಿ ದೇವಾಲಯ ಸಮೀಪದ ಉದ್ಯಾನದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಚಿತ್ರದುರ್ಗದ ಲಯನ್ಸ ಕ್ಲಬ್, ಚಿತ್ರದುರ್ಗ ಫೋರ್ಟ್ , ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಲಾ ಚೈತನ್ಯ ಸೇವಾ ಸಂಸ್ಥೆ, ಜಿಲ್ಲಾ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಪರಿಸರ ಸ್ನೇಹಿ ಗಣಪತಿ ತಯಾರಿ ಮತ್ತು ಸದ್ಭಾವನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಗಣೇಶನ ಹಬ್ಬದ ಹೆಸರಲ್ಲಿ ಕಲ್ಯಾಣಿ, ಬಾವಿ, ಕೆರೆ, ಹೊಂಡ, ನೀರಿನ ಮೂಲಗಳನ್ನು ಕಲುಷಿತಗೊಳಿಸಬೇಡಿ. ಕಲ್ಯಾಣಿಗಳಿರುವುದು ನೀರು ಸಂಗ್ರಹಿಸುವುದಕ್ಕೆ ವಿನಾ ಕಸ ಹಾಕುವುದಕ್ಕಲ್ಲ. ಜನರಲ್ಲಿ ಇಂಥ ಜಾಗೃತಿಯನ್ನು ಮೂಡಿಸಬೇಕು’ ಎಂದು ಅವರು ಸಲಹೆ ನೀಡಿದರು.
ವಕೀಲರ ಸಂಘ ಅಧ್ಯಕ್ಷ ಎನ್.ಬಿ.ವಿಶ್ವನಾಥ್, ‘ಬಣ್ಣದ ಗಣೇಶನ ವಿಗ್ರಹಗಳನ್ನು ಜಲಮೂಲಗಳಲ್ಲಿ ಮುಳುಗಿಸಬೇಡಿ. ನೀರನ್ನು ಕಲುಷಿತಗೊಳಿಸಬೇಡಿ’ ಎಂದು ಮನವಿ ಮಾಡಿದರು. ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಟಿ.ಶಂಕರಪ್ಪ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಶಿವು ಯಾದವ್, ಲಯನ್ಸ್ ಕ್ಲಬ್ನ ಕೆ.ಎಸ್.ವಿಜಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸಮೀರ್. ಪಿ.ನಂದ್ಯಾಲ, ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಶಂಕರಪ್ಪ ಮಾಲಶೆಟ್ಟಿ, ಲಯನ್ಸ ಕ್ಲಬ್ ಅಧ್ಯಕ್ಷೆ ಎಂ.ವಿ.ವೀಣಾ, ವಕೀಲರ ಸಂಘದ ಉಪಾಧ್ಯಕ್ಷ ಕೆ.ವೀರಭದ್ರಪ್ಪ, ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಸಹಾಯಕ ಅಧಿಕಾರಿ ಲೋಹಿತ್, ರೈತ ಮಹಿಳೆ ಶಾಂತಾ ಅಶೋಕ್, ಲಯನೆಸ್ ಕ್ಲಬ್ ಅಧ್ಯಕ್ಷೆ ಉಮಾ ಗುರುರಾಜ, ಕಾರ್ಯದರ್ಶಿ ಮಾಳವಿಕಾ, ಚಂದ್ರಮ್ಮ ಧನ್ವಂತರಿ ವೈದ್ಯ ಕೆ.ದೀನೇಶ, ಸಮಗ್ರ ಜಿಲ್ಲಾ ದೇಶಿ ಕಲಾ ಸಂಸ್ಥೆ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.