ADVERTISEMENT

ಗ್ರಾಫಿಕ್‌ಗಿಂತ ಕೈ ಬರಹ ಚಿತ್ರಗಳೇ ಅಚ್ಚುಮೆಚ್ಚು

ರಾಜ್ಯ ಮಟ್ಟದ ಚಿತ್ರಕಲಾ ಶಿಬಿರದಲ್ಲಿ ಸಚಿವ ಎಚ್‌.ಆಂಜನೇಯ

​ಪ್ರಜಾವಾಣಿ ವಾರ್ತೆ
Published 15 ಮೇ 2017, 4:44 IST
Last Updated 15 ಮೇ 2017, 4:44 IST
ಚಿತ್ರದುರ್ಗ: ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅತ್ಯದ್ಭುತವಾಗಿ ಗ್ರಾಫಿಕ್ಸ್‌ ಚಿತ್ರಗಳನ್ನು ಬಿಡಿಸಬಹುದಾಗಿದ್ದರೂ ಸಹಜತೆ ಇರುವ ಕೈಬರಹದ ಚಿತ್ರಗಳೇ ಎಂದೆಂದಿಗೂ ಅಚ್ಚುಮೆಚ್ಚು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ತಿಳಿಸಿದರು. 
 
ಸರ್ಕಾರದ ನಾಲ್ಕು ವರ್ಷಗಳ ಆಡಳಿತ ಪೂರೈಕೆ ಹಿನ್ನೆಲೆಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಭಾನುವಾರ ಜನ ಮನನ - ಜನ ನಮನ ಮಾಹಿತಿ ಉತ್ಸವ, ವಸ್ತು ಪ್ರದರ್ಶನದ ಅಂಗವಾಗಿ ಹಮ್ಮಿ ಕೊಂಡಿದ್ದ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
 
ಚಿತ್ರ ಬಿಡಿಸುವ ಕಲಾವಿದರ ಶ್ರಮ ಅದ್ಭುತ. ಆದರೆ, ಗಣಕಯಂತ್ರದ ಪ್ರಭಾವದಿಂದಾಗಿ ನೈಜ ಕಲಾವಿದರ ಕೈಗೆ ಕೆಲಸ ಕಡಿಮೆಯಾಗುತ್ತಿದೆ. ಹಿಂದೆ ಮಹನೀಯರ ಚಿತ್ರಕ್ಕಾಗಿ ಗಂಟೆಗಟ್ಟಲೆ ಕಲಾವಿದರ ಹತ್ತಿರ ಕಾಯಬೇಕಿತ್ತು.
 
ಪ್ರಸ್ತುತ ದಿನಗಳಲ್ಲಿ ಗಣಕಯಂತ್ರದ ಸಹಾಯದಿಂದ ಕ್ಷಣಾರ್ಧದಲ್ಲಿ ಇಂತಹ ಚಿತ್ರಗಳನ್ನು ಮುದ್ರಿಸಿಕೊಡಲಾಗುತ್ತದೆ. ಈಗ ಚಿತ್ರ ಬಿಡಿಸಲು ಕಲಾವಿದರಾಗಬೇಕೆಂದೇನಿಲ್ಲ, ಈ ಬಗ್ಗೆ ಗಣಕಯಂತ್ರ ತರಬೇತಿ ಹೊಂದಿದ್ದರೆ ಸಾಕು ಎಂದು ಅಭಿಪ್ರಾಯಪಟ್ಟರು. 
 
ಸರ್ಕಾರ ಅನೇಕ ಜನಪರ ಯೋಜನೆ ಗಳನ್ನು ಅನುಷ್ಠಾನಗೊಳಿಸಿದ್ದು, ಈ ಯಶಸ್ವಿ ಯೋಜನೆಗಳ ಬಗ್ಗೆ ಇನ್ನಷ್ಟು ಪ್ರಚಾರ ಕೈಗೊಳ್ಳಲು ಈ ಕಲಾವಿದರು ಬಿಡಿಸುವ ಚಿತ್ರಗಳನ್ನು ಬಳಸಿಕೊಳ್ಳಲಾ ಗುತ್ತದೆ.
 
ಆದ್ದರಿಂದ ಸರ್ಕಾರದ ಯೋಜನೆಗಳ ಕಲ್ಪನೆಗಳೊಂದಿಗೆ ಚಿತ್ರ ಬಿಡಿಸಲು ಈ ಸ್ಪರ್ಧೆ ಆಯೋಜಿಸ ಲಾಗಿದ್ದು, ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ಯೋಜನೆಗಳ ಪ್ರಚಾರದ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದರು. 
 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕಳೆದ ನಾಲ್ಕು ವರ್ಷದಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಬಗ್ಗೆ ಹೊರ ತಂದಿರುವ ಕಿರುಪುಸ್ತಕವನ್ನು ಸಚಿವರು ಬಿಡುಗಡೆ ಮಾಡಿದರು. 
 
ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಸಿ.ಚಂದ್ರಶೇಖರ್, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ಪಂಚಾಯ್ತಿ ಸಿಇಒ ನಿತೇಶ್ ಪಾಟೀಲ್, ವಾರ್ತಾಧಿಕಾರಿ ಧನಂಜಯ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಜು ಇದ್ದರು. ಕಲಾ ಶಿಬಿರ ನಿರ್ದೇಶಕ ಡಿ.ಕೆ.ರಂಗನಾಥ್ ಸ್ವಾಗತಿಸಿದರು. ಡೆಲ್ಟಾ ಸೊಸೈಟಿ ಕಾರ್ಯದರ್ಶಿ ಸಿ.ಯಮುನಾ ವಂದಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.