ಚಿತ್ರದುರ್ಗ: ‘ಪ್ರತಿ ವರ್ಷದಂತೆ ಈ ವರ್ಷವೂ ಹೋಟೆಲ್ ಉದ್ಯಮದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
2016–17ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜುಲೈ 1 ರಂದು ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ’ ಎಂದು ಹೋಟೆಲ್ ಮತ್ತು ಉಪಹಾರ ಮಂದಿರಗಳ ಸಂಘದ ರಾಜ್ಯಾಧ್ಯಕ್ಷ ಎಂ.ರಾಜೇಂದ್ರ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಉದ್ಯಮ ರತ್ನ’ ಮತ್ತು ‘ಆತಿಥ್ಯ ರತ್ನ’ ಎಂಬ ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಉದ್ಯಮ ರತ್ನ ಪ್ರಶಸ್ತಿಗೆ, ಹುಬ್ಬಳ್ಳಿಯ ರಾಮಚಂದ್ರ ರಂಗಪ್ಪ ಕಾಮತ್, ಬೆಂಗಳೂರಿನ ಹರಿಪ್ರಸಾದ್ ಎಸ್ ಶೆಟ್ಟಿ, ಗದಗದ ಕೆ.ಸುಧಾಕರರಾವ್, ಚಿತ್ರದುರ್ಗದ ಗೋಪಾಡಿ ಅಚ್ಚುತರಾವ್, ದಾವಣಗೆರೆಯ ಅಣಬೇರು ರಾಜಣ್ಣ, ಬೆಳಗಾವಿಯ ನಾರಾಯಣ ಹರಿಶ್ಚಂದ್ರ ಪೈ, ಬೆಂಗಳೂರಿನ ಟಿ.ಎನ್. ರಾಘವೇಂದ್ರ ರಾವ್, ಬಾಗಲಕೋಟೆಯ ಸದಾನಂದ ಸುಬ್ಬಣ್ಣ ಭಟ್ ಉಡುಪಿ, ಕೊಪ್ಪಳದ ಕೆ.ವಾಸುದೇವರಾವ್ ಅವರನ್ನು ಆಯ್ಕೆ ಮಾಡಲಾಗಿದೆ. ‘ಆತಿಥ್ಯ ರತ್ನ’ ಪ್ರಶಸ್ತಿಗೆ ಬೆಂಗಳೂರಿನ ಕೆ.ಎಚ್. ರಾಘವೇಂದ್ರರಾವ್ ಮತ್ತು ನರೇಂದ್ರ ಕುಮಾರ್, ಉಡುಪಿಯ ವಿಠ್ಠಲ್ ಪೈ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.
‘ಹೋಟೆಲ್ ಉದ್ಯಮದಲ್ಲಿ ಸಾಧನೆ ಮಾಡಿದವರನ್ನು ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸುವುದಿಲ್ಲ. ಆದ್ದರಿಂದ, ನಮ್ಮ ಸಂಘದಿಂದಲೇ ಕೆಲ ವರ್ಷ ಗಳಿಂದ ಈ ಪ್ರಶಸ್ತಿಗಳನ್ನು ನೀಡಲಾಗು ತ್ತಿದೆ. ಈಗಾಗಲೇ ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಸಿದ್ದೇವೆ. ಈ ವರ್ಷ ಚಿತ್ರದುರ್ಗದಲ್ಲಿ ಆಯೋಜಿಸಲಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ, ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಎಂ.ಅರುಣ್ ರಂಗರಾಜನ್ ಭಾಗವಹಿಸಲಿದ್ದಾರೆ’ ಎಂದರು.
ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಅರುಣ್ಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್ ಉಪಾಧ್ಯ, ಕಾರ್ಯದರ್ಶಿ ಜಿ.ಎ.ದೀಪಾನಂದ ಉಪಾಧ್ಯ, ಸುಧಾಕರ, ವಾಸುದೇವರಾವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.