ADVERTISEMENT

ದೌರ್ಜನ್ಯ : ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 4:13 IST
Last Updated 18 ಏಪ್ರಿಲ್ 2017, 4:13 IST
ಚಿತ್ರದುರ್ಗ: ಜಿಲ್ಲೆಯಲ್ಲಿ ದಲಿತರ ಮೇಲೆ ನಡೆದಿರುವ ಹಲ್ಲೆ, ದೌರ್ಜನ್ಯ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
 
ನಗರದ ಜಿಲ್ಲಾಧಿಕಾರಿ ವೃತ್ತದ ಮುಂಭಾಗದಲ್ಲಿ ಕೆಲಕಾಲ ಸೇರಿದ ಕಾರ್ಯಕರ್ತರು, ‘ದೌರ್ಜನ್ಯ ಎಸಗಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು.
 
‘ಡಾ.ಅಂಬೇಡ್ಕರ್ ಸಂವಿಧಾನ ತತ್ವದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಅನೇಕ ಕಾನೂನುಗಳನ್ನು ರಚಿಸಿದ್ದಾರೆ. ಆದರೂ ದೇಶದ ಜಾತಿ ವ್ಯವಸ್ಥೆಯಲ್ಲಿ ಕೆಳಜಾತಿಯವರ ಮೇಲೆ ಇನ್ನೂ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಾ ಬಂದಿರುವುದು ವಿಷಾದನೀಯ’ ಎಂದು ಪ್ರತಿಭಟನಾಕಾರರು ಹೇಳಿದರು.
 
‘ಚಳ್ಳಕೆರೆ ತಾಲ್ಲೂಕಿನ ತೊರಕೋಲಮ್ಮನಹಳ್ಳಿ, ಗಜ್ಜುಗಾನಹಳ್ಳಿ, ಚಿತ್ರನಾಯಕನಹಳ್ಳಿ, ದೇವರಮರಿಕುಂಟೆ, ಕಪ್ಪಗೊಂಡನಹಳ್ಳಿ, ಚಿತ್ರದುರ್ಗ ತಾಲ್ಲೂಕಿನ ತಮಟಕಲ್ಲು, ಮಾರಘಟ್ಟ, ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿಗಳಲ್ಲಿ ಒಂದಿಲ್ಲೊಂದು ರೀತಿಯ ದೌರ್ಜನ್ಯ ನಡೆದಿದೆ’ ಎಂದರು. ಮುಖಂಡರಾದ ಎಂ.ಜಯಣ್ಣ, ಡಿ.ದುರಗೇಶ್, ಗುರುಮೂರ್ತಿ, ಯಶವಂತ್‌ ರಾಜ್, ರಾಜಣ್ಣ, ಮಲ್ಲೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.