ADVERTISEMENT

ಯುವಜನ ಮೇಳ ರದ್ದು ಕ್ರಮಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 5:05 IST
Last Updated 18 ಜುಲೈ 2017, 5:05 IST

ಚಿತ್ರದುರ್ಗ: ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಯುವಜನ ಮೇಳವನ್ನು ರದ್ದುಗೊಳಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ರಾಜ್ಯ ಯುವಜನ ಒಕ್ಕೂಟಗಳ ರಾಜ್ಯ ಘಟಕದ ಎ.ಚಿತ್ತಪ್ಪ ಯಾದವ್ ನೇತೃತ್ವದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು ಸೋಮವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

‘ಯುವಜನ ಮೇಳಗಳನ್ನು ರದ್ದು ಮಾಡುವ ಮೂಲಕ ಜಾನಪದ ಸಂಸ್ಕೃತಿಯನ್ನು ನಾಶ ಮಾಡುವ ಕಾರ್ಯಕ್ಕೆ ಇಲಾಖೆ ಮುಂದಾಗಿರುವುದು ಸರಿಯಲ್ಲ. ಗ್ರಾಮೀಣ ದೇಸಿ ಕಲೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಯುವಜನ ಮೇಳಗಳು ತನ್ನದೇ ಶಕ್ತಿ ಹೊಂದಿವೆ. ಡೊಳ್ಳು, ಕೋಲಾಟ, ವೀರಗಾಸೆ, ಗೊರವರ ಕುಣಿತ ಸೇರಿ ಹತ್ತಾರು ಜಾನಪದ ಕಲೆಗಳನ್ನು ಯುವಕರು ಕಲಿತು ಪ್ರದರ್ಶನ ಮಾಡುವ ಮೇಳವನ್ನೇ ರದ್ದು ಮಾಡಿದರೆ ಜಾನಪದ ಕಲೆ ನಶಿಸುತ್ತವೆ’ ಎಂದು ಮನವಿಯಲ್ಲಿ ವಿವರಿಸಲಾಗಿದೆ.

‘ಯುವ ಸಬಲೀಕರಣ ಇಲಾಖೆಯ ಸಚಿವರಿಗೆ ಯುವಕರ ಕಷ್ಟಗಳು, ನೋವುಗಳು ತಿಳಿಯುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಕೆಲಸವನ್ನೂ ಮಾಡದ ಇಲಾಖೆ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಯುವಜನ ಮೇಳವನ್ನು ರದ್ದುಗೊಳಿಸಿರುವುದು ಖಂಡನೀಯ, ಆದೇಶ ಕೂಡಲೇ ವಾಪಸು ಪಡೆಯದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು’ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ADVERTISEMENT

ಯುವ ಜನಮೇಳ, ಯುವ ಜನೋತ್ಸವ, ಯುವ ಕಾರ್ಯಾಗಾರಗಳನ್ನು  ಪ್ರತ್ಯೇಕವಾಗಿ ಮಾಡದೆ ಒಂದೇ ವೇದಿಕೆಯ ಮೇಲೆ ಆಯೋಜಿಸುವಂತೆ ಆದೇಶ ನೀಡಿರುವುದು ಅರ್ಥಹೀನ. ಹಿಂದೆ ಇದ್ದಂತೆ ಕಾರ್ಯಕ್ರಮ ನಡೆಸಬೇಕು’  ಎಂದು ಒತ್ತಾಯಿಸಲಾಗಿದೆ.

ಜಿಲ್ಲಾಧಿಕಾರಿಗೆ ಮನವಿ ನೀಡುವ ವೇಳೆ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಚಮನ್ ಷರೀಫ್, ಮಾಲತೇಶ್ ಅರಸ್ ಹರ್ತಿಕೋಟೆ, ಗೋಪಾಲಸ್ವಾಮಿ ನಾಯಕ್, ಡಿ.ಒ.ಮುರಾರ್ಜಿ, ಶ್ರೀನಿವಾಸ್ ಮಳಲಿ, ಪ್ರತಾಪ್‌ ಜೋಗಿ, ಯುವಜನ ಶಿಕ್ಷಣ ಪರಿಚಾರಕಿ ಬಿ.ಜೆ. ಶ್ರುತಿ, ಸುರೇಶ್, ಈರಪ್ಪ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.