ಮೊಳಕಾಲ್ಮುರು: ತಾಲ್ಲೂಕಿನ ದೇವಸಮುದ್ರ ಹೋಬಳಿ ಅದರಲ್ಲೂ ಮುಖ್ಯವಾಗಿ ರಾಂಪುರ ಸುತ್ತಮುತ್ತ ಗ್ರಾಮಗಳಲ್ಲಿ ಮಂಗಳವಾರ ಬೆಳಿಗ್ಗೆ ಉತ್ತಮ ಮಳೆಯಾಗಿದೆ.ಬೆಳಗಿನ ಜಾವದಿಂದ ಆರಂಭವಾದ ಮಳೆ 11 ಗಂಟೆವರೆಗೆ ಸುರಿಯಿತು. 8 ಗಂಟೆಗೂ ಮುನ್ನ ಮಳೆಮಾಪನ ಕೇಂದ್ರದಲ್ಲಿ 34 ಮಿಮೀ ಮಳೆ ದಾಖಲಾಗಿದೆ, ಒಟ್ಟು 60–65 ಮಿಮೀ ಮಳೆ ಆಗಿರಬಹುದು, ನಿಖರ ಪ್ರಮಾಣ ನಾಳೆ ಬೆಳಿಗ್ಗೆ ದೊರೆಯುತ್ತದೆ ಎಂದು ತಹಶೀಲ್ದಾರ್ ಕೊಟ್ರೇಶ್ ತಿಳಿಸಿದರು.
ಗಂಗಮ್ಮನಹಳ್ಳ, ಗುಂಡೇರಿ ಹಳ್ಳಗಳು ತುಂಬಿ ಹರಿದಿವೆ, ಸಮೀಪದ ಚೆಕ್ಡ್ಯಾಂಗಳು ಹಾಗೂ ಕೃಷಿ ಹೊಂಡಗಳಿಗೆ ನೀರು ಹರಿದುಬಂದಿದೆ. ಪಕ್ಕುರ್ತಿ, ದೇವಸಮುದ್ರ ಕೆರೆಗೆ ಅಲ್ಪ ಪ್ರಮಾಣದ ನೀರು ಬಂದಿದೆ. ಬೆಳೆಗಳಿಗೆ, ಮುಖ್ಯವಾಗಿ ಶೇಂಗಾಕ್ಕೆ ಈ ಮಳೆ ಹೆಚ್ಚು ಅನುಕೂಲವಾಗಿದ್ದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
ಕಸಬಾ ಹೋಬಳಿಯಲ್ಲಿ ಮಳೆ ನಿರಂತರವಾಗಿ ಕೈಕೊಡುತ್ತಿರುವ ಕಾರಣ ಬೆಳೆಗಳು ಒಣಗುವ ಹಂತದಲ್ಲಿದ್ದು ಒಂದು ವಾರದಲ್ಲಿ ಮಳೆ ಬಂದಲ್ಲಿ ಮಾತ್ರ ಬೆಳೆಗಳು ಉಳಿಯಲು ಸಾಧ್ಯ, ಇಲ್ಲವಾದಲ್ಲಿ ‘ದೇವರೇ ಗತಿ’ ಎಂಬ ಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.