ಮೊಳಕಾಲ್ಮುರು: ತಾಲ್ಲೂಕಿನ ಕೋನಸಾಗರದಲ್ಲಿ ಶುಕ್ರವಾರ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು. ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ಈ ರಥೋತ್ಸವದ ಅಂಗವಾಗಿ ಗುರುವಾರ ಸ್ವಾಮಿಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಗಂಗಾಪೂಜೆ ಮಾಡಲಾಗಿತ್ತು. ನಂತರ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಶುಕ್ರವಾರ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆಯ ನಂತರ, ರಥಕ್ಕೆ ಬಲಿ ಅನ್ನ ಸಮರ್ಪಣೆ ಮಾಡಲಾಯಿತು. ನಂತರ ಹೋಮ ಮಾಡಲಾಯಿತು. ಮಧ್ಯಾಹ್ನ 1.30ಕ್ಕೆ ರಥೋತ್ಸವ ಆರಂಭವಾಯಿತು. ಗ್ರಾಮದ ಒಳಗಿನ ದೇವಸ್ಥಾನ ಮುಂಭಾಗದಿಂದ ರಥೋತ್ಸವ ನೇತ್ರನಹಳ್ಳಿ ರಸ್ತೆಯಲ್ಲಿರುವ ಪಾದಗಟ್ಟೆವರೆಗೆ ಸಾಗಿ ಮರಳಿ ದೇವಸ್ಥಾನ ಆವರಣಕ್ಕೆ ವಾಪಸ್ ತರಲಾಯಿತು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಗೊಂಬೆಗಳ ಕುಣಿತ ನೋಡುಗರ ಗಮನ ಸೆಳೆದವು. ಮೈಸೂರಿನ ಉದ್ಯಮಿ ಎಸ್.ಸೋಮಣ್ಣ ರಥದ ಮುಕ್ತಿ ಭಾವುಟವನ್ನು ₹ 1 ಲಕ್ಷಕ್ಕೆ ಹರಾಜಿನಲ್ಲಿ ಪಡೆದುಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.