ADVERTISEMENT

‘ಶಾಸಕ ಸುಧಾಕರ್ ಏಕಾಂಗಿಯಾಗಲು ಬಿಡೆವು’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 7:14 IST
Last Updated 15 ಏಪ್ರಿಲ್ 2018, 7:14 IST

ಹಿರಿಯೂರು: ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶಾಸಕ ಡಿ. ಸುಧಾಕರ್ ಅವರನ್ನು ಏಕಾಂಗಿಯಾಗಲು ಬಿಡುವುದಿಲ್ಲ. ಅವರ ಬೆನ್ನಿಗೆ ಕ್ಷೇತ್ರದಪರಿಶಿಷ್ಟ ಜಾತಿ–ಪಂಗಡ, ಹಿಂದುಳಿದವರು, ಮುಂದುವರಿದ ಜನಾಂಗದ ಪ್ರಜ್ಞಾವಂತರು ಸದಾ ನಿಂತಿದ್ದಾರೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಇ. ಮಂಜುನಾಥ್ ಹೇಳಿದರು.

ನಗರದ ಅವರು ತಾಹಾ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್ ಎಸ್‌ಟಿ ಘಟಕದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

‘ಜೈನ ಸಮುದಾಯದ 50 ಮತಗಳು ಕ್ಷೇತ್ರದಲ್ಲಿ ಇಲ್ಲ. ಆದರೂ ಇಲ್ಲಿನ ಮತದಾರರು ಎರಡು ಬಾರಿ ಅವರನ್ನು ಚುನಾಯಿಸಿರುವುದರ ಹಿಂದೆ ರಾಜಕೀಯ ಮುತ್ಸದ್ದಿತನವಿದೆ. ಇಂತಹ ವ್ಯಕ್ತಿಯಿಂದ ಸಮಗ್ರ ಸಮುದಾಯಗಳ ಏಳಿಗೆ ಸಾಧ್ಯ ಎಂಬ ಭಾವನೆ ಜನರಲ್ಲಿ ಬಂದಿದೆ. ಕೆಲವು ಪಟ್ಟಭದ್ರ ಶಕ್ತಿಗಳು
ಶಾಸಕರಿಗೆ ಜಾತಿಬಲ ಇಲ್ಲ ಎಂಬ ಕಾರಣಕ್ಕೆ ಹಲವು ರೀತಿಯಲ್ಲಿ ಹಿಂಸೆ ನೀಡುತ್ತ ಬಂದಿದ್ದಾರೆ. ಆದರೂ ಪ್ರಜ್ಞಾವಂತ ಮತದಾರರು ಅವರ ಕೈಹಿಡಿದಿದ್ದಾರೆ. ಈ ಬಾರಿಯೂ ಹಿಡಿಯಲಿದ್ದಾರೆ’ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ADVERTISEMENT

ಶಾಸಕ ಡಿ. ಸುಧಾಕರ್ ಮಾತನಾಡಿ, ‘ಅಲ್ಪಸಂಖ್ಯಾತ ಸಮುದಾಯಕ್ಕೆನಾನು ಸೇರಿರುವ ಕಾರಣ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸಿರುವ ತೃಪ್ತಿ ಇದೆ. ಅದೇ ಬಹುಸಂಖ್ಯಾತನಾಗಿದ್ದರೆ ಆ ಜಾತಿಯ ಹಿತರಕ್ಷಣೆ ಮಾಡಬೇಕಾಗುತ್ತಿತ್ತು. ಜಾತಿವಾದ, ಕೋಮುವಾದ ಈ ದೇಶಕ್ಕೆ ಅಂಟಿರುವ ದೊಡ್ಡ ಕಳಂಕ. ಅವನ್ನು ಮೆಟ್ಟಿನಿಂತು ಸಮಾಜದ ಅಭಿವೃದ್ಧಿಯೇ ಮುಖ್ಯವಾಗುವ ಕಾಲ ಬರಬೇಕಿದೆ. ಪ್ರಜ್ಞಾವಂತ ಮತದಾರರು ಈ ಬಗ್ಗೆ ಗಂಭೀರ ಚಿಂತನೆ ಮಾಡುವ ಮೂಲಕ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು. ಕ್ಷೇತ್ರದಲ್ಲಿ ಹಿಂದಿನ ಹತ್ತು ವರ್ಷ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಮತ್ತೊಮ್ಮೆ ಕೂಲಿ ಕೇಳುತ್ತಿದ್ದೇನೆ ಎಂದು ಮನವಿ ಮಾಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚಂದ್ರಪ್ಪ, ಖಾದಿ ರಮೇಶ್, ಎಂ.ಒ. ಮಂಜಣ್ಣ, ಎಸ್.ಆರ್. ತಿಪ್ಪೇಸ್ವಾಮಿ, ಚಿದಾನಂದ್, ಎ. ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.