ADVERTISEMENT

ಸಂಭ್ರಮದ ಹೋಳಿಗೆಮ್ಮನ ಹಬ್ಬ ಆಚರಣೆ

ದೇಗುಲದ ಬಳಿ ದೇವಿಗೆ ಸಿಹಿ ನೈವೇದ್ಯ: ಕೃಪೆ ತೋರುವಂತೆ ವರುಣನಿಗೆ ಭಕ್ತರ ಮೊರೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 9:28 IST
Last Updated 27 ಜುಲೈ 2016, 9:28 IST

ನಾಯಕನಹಟ್ಟಿ: ಪಟ್ಟಣದ ಒಳಮಠ ಸೇರಿದಂತೆ ಅಂಬೇಡ್ಕರ್‌ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಾದ ಮಾದಯ್ಯನ ಹಟ್ಟಿ, ಜಾಗನೂರಹಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ  ಮಂಗಳವಾರ ಸಂಭ್ರಮ ಸಡಗರದಿಂದ ಹೋಳಿಗೆಮ್ಮನ ಹಬ್ಬವನ್ನು ಆಚರಿಸಲಾಯಿತು.

ನೂರಾರು ವರ್ಷಗಳಿಂದ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಿ ಕೊಂಡು ಬಂದಿರುವ ಹೋಳಿಗೆಮ್ಮನ ಹಬ್ಬ ಸಂತೋಷದಿಂದ ಆಚರಣೆ ಮಾಡಲಾಗುತ್ತಿದೆ. ಈ ಹಬ್ಬವನ್ನು ಆಚರಣೆ ಮಾಡುವುದರಿಂದ ಸಮೃದ್ಧ ಮಳೆ–ಬೆಳೆ ಆಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ, ಪಟ್ಟಣದ ಬಹುತೇಕ ಜನರು ಬೆಳಗ್ಗಿನಿಂದಲೇ ಶ್ರದ್ಧಾಭಕ್ತಿಯಿಂದ ಹೋಳಿಗೆಮ್ಮನಿಗೆ ಎಡೆ ಮಾಡಿಕೊಂಡು ಬಂದು ದೇವಾಲಯದ ಬಳಿ ಪ್ರತಿಷ್ಠಾಪಿಸಿರುವ ದೇವಿಯ ಮೂರ್ತಿಗೆ  ಅರ್ಪಿಸುತ್ತಿದ್ದ ದೃಶ್ಯ ಕಂಡುಬಂತ್ತು.

ಸಂಜೆ 5.30ಕ್ಕೆ ಗ್ರಾಮದ ಯುವಕರು ಹೋಳಿಗೆಮ್ಮನ ಉತ್ಸವಮೂರ್ತಿ ಹಾಗೂ ಭಕ್ತರು ಅರ್ಪಿಸಿದ ಎಡೆಯನ್ನು ಹೊತ್ತು ಮೆರವಣಿಗೆಯ ಮೂಲಕ ಘೋಷಣೆಗಳನ್ನು ಕೂಗುತ್ತಾ, ಗ್ರಾಮದ ಹೊರವಲಯದಲ್ಲಿರುವ ಗಡಿಭಾಗದ ಬಳಿ ಇರುವ ಬೇವಿನ ಮರದ ಹತ್ತಿರ ದೇವರನ್ನು ತಂದು ಪೂಜೆಸಲ್ಲಿಸಿ ವಿಸರ್ಜನೆ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಚಂದ್ರಶೇಖರ್, ದಳವಾಯಿ ರುದ್ರಮುನಿ, ಮಹಾಂತೇಶ, ನಾಗೇಶ, ಕಾಂತರಾಜ್, ಮಂಜುನಾಥ ಸೇರಿದಂತೆ ನೂರಾರು ಯುವಕರು ಭಾಗವಹಿಸಿದ್ದರು.

ಪರಶುರಾಂಪುರ
ಮಳೆಗಾಗಿ ಪ್ರಾರ್ಥಿಸಿ ಗ್ರಾಮದ ಸುಮಂಗಲಿಯರು ಹೋಳಿಗೆ ಹಬ್ಬವನ್ನು ಮಂಗಳವಾರ ವಿಜೃಂಭಣೆಯಿಂದ ಆಚರಿಸಿದರು. ಸತತ ಮಳೆಯ ಅಭಾವದಿಂದ ಕಂಗಾಲಾದ ಜನರು ಮಳೆಗಾಗಿ ವರುಣನನ್ನು ನೆನೆದು ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗ ದಲ್ಲಿನ ಬುಡ್ಡೇಕಲ್ಲಿಗೆ ಹೋಳಿಗೆ ಎಡೆಹಾಕಿ ವಿಶೇಷವಾಗಿ ಪೂಜೆ ಸಲ್ಲಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಸದಸ್ಯರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.