ADVERTISEMENT

ಸಂಸದರ ಅನುದಾನದಲ್ಲಿ ಶುದ್ಧ ನೀರಿನ ಘಟಕ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 5:54 IST
Last Updated 20 ಮಾರ್ಚ್ 2017, 5:54 IST

ಹಿರಿಯೂರು: ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸದ  ಬಿ.ಎನ್. ಚಂದ್ರಪ್ಪ ಅವರ ಅನುದಾನದಲ್ಲಿ ₹ 13 ಲಕ್ಷ ವೆಚ್ಚದ ಕುಡಿಯುವ ನೀರಿನ ಟ್ಯಾಂಕರ್ ಅನ್ನು ನಗರಸಭೆಗೆ ನೀಡಲಾಯಿತು.

ನಗರದ ಕೃಷಿ ಮಾರುಕಟ್ಟೆ ಸಮಿತಿ ಆವರಣ,ರಾಜ್ಯ ರಸ್ತೆ ಸಾರಿಗೆ ನಿಲ್ದಾಣ, ಪ್ರವಾಸಿ ಮಂದಿರ ವೃತ್ತ ಹಾಗೂ ಚಿಟುಗುಮಲ್ಲೇಶ್ವರ ಬಡಾವಣೆಗಳಲ್ಲಿ   ₹10 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ 176 ತಾಲ್ಲೂಕುಗಳ ಪೈಕಿ 160 ತಾಲ್ಲೂಕುಗಳಲ್ಲಿ ಬರ ಆವರಿಸಿದೆ. ದೇಶದ ಯಾವುದೇ ಕಡೆ ಇಂಥ ಬರಪರಿಸ್ಥಿತಿ ಇಲ್ಲ. ಜನ–ಜಾನುವಾರಿಗೆ  ಕುಡಿಯುವ ನೀರು ಪೂರೈಸುವುದು ಆಡಳಿತ ನಡೆಸುವವರಿಗೆ ದೊಡ್ಡ ಸವಾಲಾಗಿದೆ ಎಂದು ಚಂದ್ರಪ್ಪ ತಿಳಿಸಿದರು.

‘ಶಾಸಕ ಸುಧಾಕರ್ ಅವರ ಮುಂದಾಲೋಚನೆಯ ಫಲವಾಗಿ ವಾಣಿ ವಿಲಾಸದ  ಜಲಾಶಯದ ನೀರನ್ನು ಐಮಂಗಲ ಹೋಬಳಿಯ 72 ಹಳ್ಳಿಗಳಿಗೆ, ಗಾಯತ್ರಿ ಜಲಾಶಯದ ನೀರನ್ನು ಜವಗೊಂಡನಹಳ್ಳಿ ಹೋಬಳಿಯ ಹಳ್ಳಿಗಳಿಗೆ ಪೈಪ್ ಲೈನ್ ಮೂಲಕ ಪೂರೈಕೆ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. ಜತೆಗೆ ಜಾನುವಾರಿಗೆ ಸ್ವಂತ ಖರ್ಚಿನಲ್ಲಿ ಮೇವು ಬೆಳೆಸುತ್ತಿರುವುದು ಶಾಸಕರ ಬದ್ಧತೆಗೆ ಸಾಕ್ಷಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಶಾಸಕ ಡಿ. ಸುಧಾಕರ್ ಮಾತನಾಡಿ, ‘ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಸ್ತುತ ತಾಲ್ಲೂಕಿನ 15 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಆರ್. ನಾಗೇಂದ್ರನಾಯ್ಕ, ಸಿ.ಬಿ. ಪಾಪಣ್ಣ, ಶಶಿಕಲಾ ಸುರೇಶ್ ಬಾಬು, ಗೀತಾನಾಗಕುಮಾರ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷೆ ಚಂದ್ರಕಲಾ, ಈರಲಿಂಗೇಗೌಡ, ಬಿ.ವಿ. ಮಾಧವ, ಇ.ಮಂಜುನಾಥ್, ಎ. ಮಂಜುನಾಥ್, ಎ.ಎಂ.ಅಮೃತೇಶ್ವರ್, ಖಾದಿ ರಮೇಶ್, ಕಲ್ಲಟ್ಟಿ ತಿಪ್ಪೇಸ್ವಾಮಿ, ಕೆ. ಓಂಕಾರಪ್ಪ, ಸಿ.ಎಚ್. ಕಾಂತರಾಜು, ಲತಾ ಸುಬ್ರಮಣ್ಯ, ಪುರುಷೋತ್ತಮ್, ಸಾದತ್ ಉಲ್ಲಾ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT