ADVERTISEMENT

ಸಮ ಸಮಾಜಕ್ಕೆ ಹೋರಾಡಿದ ಸಂತ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 6:18 IST
Last Updated 7 ನವೆಂಬರ್ 2017, 6:18 IST

ಹಿರಿಯೂರು: ‘ಸಮಾಜದಲ್ಲಿ ವರ್ಣ, ವರ್ಗ ಸಂಘರ್ಷಗಳನ್ನು ತೊಲಗಿಸಿ ಸಮಾನತೆಯ ತಳಹದಿಯ ಸಮಾಜ ನಿರ್ಮಾಣಕ್ಕೆ ಹೋರಾಟ ನಡೆಸಿದ ಕನಕದಾಸರ ಆದರ್ಶ ಎಲ್ಲ ಕಾಲಕ್ಕೂ ಅನುಕರಣನೀಯ’ ಎಂದು ಶಾಸಕ ಡಿ. ಸುಧಾಕರ್ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನಕದಾಸರ ಆದರ್ಶಗಳನ್ನು ಮಾದರಿಯಾಗಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಮಂಡಿಸಿ, ಎಲ್ಲ ವರ್ಗದವರಿಗೆ ಸಮಾನ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ನಗರದ ಹುಳಿಯಾರು ರಸ್ತೆಯಲ್ಲಿ ಕನಕ ಭವನ ನಿರ್ಮಾಣಕ್ಕೆ ₹ 1 ಕೋಟಿ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಹಿರಿಯ ಉಪನ್ಯಾಸಕ ಚಂದ್ರಯ್ಯ ಮಾತನಾಡಿ, ‘ಹರಿದಾಸ ಪರಂಪರೆಗೆ ಸೇರಿದ ದಾಸ ಶ್ರೇಷ್ಠರಲ್ಲಿ ಶೂದ್ರ ವರ್ಗಕ್ಕೆ ಸೇರಿದವರು ಕನಕದಾಸರು ಮಾತ್ರ. ಜಾತಿ ಹೆಸರಿನಲ್ಲಿ ಸಮಾಜದಲ್ಲಿ ತಿರಸ್ಕೃತಗೊಂಡವರಿಗೆ ಅಕ್ಷರದ ಜ್ಞಾನ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದು ಬದುಕಲು ದಾರಿ ತೋರಿಸಿದರು. ಕನಕದಾಸರನ್ನು ಕುರುಬ ಸಮುದಾಯದ ವ್ಯಕ್ತಿ ಎಂದು ಸಂಕೀರ್ಣಗೊಳಿಸಬಾರದು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚಂದ್ರಪ್ಪ ಸಮಾರಂಭ ಉದ್ಘಾಟಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರಮೂರ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶಶಿಕಲಾ ಸುರೇಶ್ ಬಾಬು, ಸ್ಥಾಯಿ ಸಮಿತಿ ಅಧ್ಯಕ್ಷ ಆರ್. ನಾಗೇಂದ್ರ ನಾಯ್ಕ್ ಹಾಗೂ ಸಿ.ಬಿ. ಪಾಪಣ್ಣ ಮಾತನಾಡಿದರು.

ತಹಶೀಲ್ದಾರ್ ವೆಂಕಟೇಶಯ್ಯ, ಬಿಇಒ ನಟರಾಜ್, ಗೀತಾ ನಾಗಕುಮಾರ್, ಈರಲಿಂಗೇಗೌಡ, ಖಾದಿ ರಮೇಶ್, ಕಲ್ಲಟ್ಟಿ ತಿಪ್ಪೇಸ್ವಾಮಿ, ದಾದಾಪೀರ್, ಇ.ಮಂಜುನಾಥ್, ಸಾದತ್ ಉಲ್ಲಾ, ಅಬ್ಬಾಸ್, ಕಂದಿಕೆರೆ ಸುರೇಶ್ ಬಾಬು, ಗಿಡ್ಡೋಬನಹಳ್ಳಿ ಅಶೋಕ್, ಪುಷ್ಪಲತಾ, ಮಹಂತೇಶ್ ಹಾಜರಿದ್ದರು.

‌ರಾಜ್ಯ ಪ್ರಶಸ್ತಿ ಪುರಸ್ಕೃತ ಗೊರವ ಮೈಲಾರಪ್ಪ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪಿ.ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮೊದಲು ತಾಲ್ಲೂಕು ಕಚೇರಿ ಮುಂಭಾಗದಿಂದ ಹೊರಟ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ನಗರಸಭೆ ಅಧ್ಯಕ್ಷ ಟಿ. ಚಂದ್ರಶೇಖರ್ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.