ADVERTISEMENT

ಸರ್ಕಾರಿ ಪ್ರೌಢಶಾಲೆಗೆ ‘ಪರಿಸರ ಮಿತ್ರ ’ಪ್ರಶಸ್ತಿ

ವೇಣುಕಲ್ಲುಗುಡ್ಡ: ಸ್ಮಾರ್ಟ್‌ ಶಾಲೆ ಗರಿಮೆಗೂ ಪಾತ್ರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 12:53 IST
Last Updated 5 ಜೂನ್ 2018, 12:53 IST
ಧರ್ಮಪುರ ಸಮೀಪದ ವೇಣುಕಲ್ಲುಗುಡ್ಡ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಕಂಗೊಳಿಸುತ್ತಿರುವ ಹಸಿರು ದೃಶ್ಯ.
ಧರ್ಮಪುರ ಸಮೀಪದ ವೇಣುಕಲ್ಲುಗುಡ್ಡ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಕಂಗೊಳಿಸುತ್ತಿರುವ ಹಸಿರು ದೃಶ್ಯ.   

ಧರ್ಮಪುರ: ಇಲ್ಲಿನ ಸರ್ಕಾರಿ ಪ್ರೌಢಶಾಲೆಗೆ ವಲಯ ಮಟ್ಟದ ‘ಪರಿಸರ ಮಿತ್ರ‍’ ‍ಪ್ರಶಸ್ತಿ ಲಭಿಸಿದೆ. ಬರದ ನಾಡಿನಲ್ಲೂ ಶಾಲೆಯ ಮೈದಾನದಲ್ಲಿ ಗಿಡ ಮರಗಳನ್ನು ಬೆಳೆಸಲಾಗಿದೆ. ಸ್ಮಾರ್ಟ್‌ ಶಾಲೆ ಗರಿಮೆಗೂ ಪಾತ್ರವಾಗಿದೆ.

ಸ್ವಚ್ಛತೆ, ಯೋಗಶಿಕ್ಷಣ, ಧ್ಯಾನ, ಕ್ರೀಡಾ ತರಬೇತಿ, ಬೋಧನಾ ಕ್ರಮ ದಲ್ಲಿನ ತಂತ್ರಜ್ಞಾನ ಬಳಕೆ, ಮೌಲ್ಯ ಶಿಕ್ಷಣ, ಶೇ 100ರಷ್ಟು ಹಾಜರಾತಿ ಇರುವ ಈ ಶಾಲೆಯಲ್ಲಿ ಉತ್ತಮ ಫಲಿತಾಂಶವು ಇದೆ.

2007ರಲ್ಲಿ ಶಾಲೆ ನಿರ್ಮಾಣ ಗೊಂಡಿದ್ದು, 2010ರಲ್ಲಿ ತರಗತಿ ಆರಂಭವಾ ಗಿದೆ. ರಾಜ್ಯದಲ್ಲಿ ಒಟ್ಟು ಏಳು ವಲಯ ಮಟ್ಟದ ಶಾಲೆಗಳನ್ನು ಗುರುತಿಸಿದ್ದು, ತುಮಕೂರು, ದಾವಣಗೆರೆ, ಶಿವಮೊಗ್ಗ ಮತ್ತು ಚಿತ್ರದುರ್ಗವನ್ನು ಒಳಗೊಳ್ಳಲಾಗಿದೆ.

ADVERTISEMENT

ಚಿತ್ರದುರ್ಗ ವಲಯದಿಂದ ಉಳಿದಂತ ಬೇರೆ ಬೇರೆ ಜಿಲ್ಲೆಯ ನೂರಾರು ಶಾಲೆಗಳನ್ನು ಹಿಂದಿಕ್ಕಿ, ಹಿರಿಯೂರು ತಾಲ್ಲೂಕಿನ ಧರ್ಮಪುರ ಸಮೀಪದ ವೇಣುಕಲ್ಲುಗುಡ್ಡ ಸರ್ಕಾರಿ ಪ್ರೌಢಶಾಲೆಗೆ ಪ್ರಶಸ್ತಿ ಲಭಿಸಿದೆ. ಜೂನ್‌ 5ರಂದು ವಿಶ್ವಪರಿಸರ ದಿನದ ಪ್ರಯುಕ್ತ ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಪ್ರಶಸ್ತಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು.

‘ಶಾಲೆಯ ಮುಖ್ಯ ಶಿಕ್ಷಕ ಮತ್ತು ಸಹ ಶಿಕ್ಷಕರ ಬದ್ಧತೆ, ಎಸ್ ಡಿಎಂಸಿ ಸದಸ್ಯರ ಪ್ರೋತ್ಸಾಹ, ಜನಪ್ರತಿನಿಧಿಗಳ ಮತ್ತು ಗ್ರಾಮಸ್ಥರ ಸಹಕಾರ ಹಾಗೂ ವಿದ್ಯಾರ್ಥಿಗಳ ಶ್ರಮದಿಂದ ಈ ಶಾಲೆಗೆ ಗರಿಮೆ ತಂದಿದೆ. ಮುಂದಿನ ದಿನಗಳಲ್ಲಿ ಎಲ್ಲ ಶಾಲೆಗಳಲ್ಲೂ ಇಂತಹ ವಾತಾವರಣ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು‌’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ನಟರಾಜ್ ಅಭಿಪ್ರಾಯಪಡುತ್ತಾರೆ.

‘ವೇಣುಕಲ್ಲುಗುಡ್ಡ ಬರಪೀಡಿತ ಪ್ರದೇಶವಾಗಿದ್ದು, ಶಾಲೆಯ ಆವರಣದಲ್ಲಿ ಒಂದೆರೆಡು ಗಿಡಗಳಿದ್ದವು. ಉತ್ತಮ ಕ್ಯಾಂಪಸ್ ಮಾಡಬೇಕೆಂಬ ಉತ್ಸಾಹವೇ ಈ ಸಾಧನೆಗೆ ಕಾರಣ. ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಮುಖ್ಯ ಶಿಕ್ಷಕ ಎಲ್.ನಾಗರಾಜಚಾರಿ.

ವಿ.ವೀರಣ್ಣ, ಧರ್ಮಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.