ADVERTISEMENT

ಹೊಸದುರ್ಗ: ಅಭಿವೃದ್ಧಿ ಕಾಮಗಾರಿಗಳ ಶ್ವೇತಪತ್ರ ಹೊರಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 6:43 IST
Last Updated 17 ಮಾರ್ಚ್ 2018, 6:43 IST

ಹೊಸದುರ್ಗ: ತಾಲ್ಲೂಕಿನಲ್ಲಿ ₹ 4,200 ಕೋಟಿ ಅಭಿವೃದ್ಧಿ ಕಾಮಗಾರಿ ಆಗಿರುವ ಬಗ್ಗೆ ಶಾಸಕ ಬಿ.ಜಿ.ಗೋವಿಂದಪ್ಪ ಅವರು ಶ್ವೇತಪತ್ರ ಹೊರಡಿಸಬೇಕು ಎಂದು ಎಸ್‌ಆರ್‌ಎಸ್‌ ಫೌಡೇಷನ್‌ ಮುಖ್ಯಸ್ಥ ಎ.ಆರ್‌.ಶಮಂತ್‌ ಒತ್ತಾಯಿಸಿದರು.

2013–14ರಿಂದ 2017–18ನೇ ಸಾಲಿನವರೆಗೂ ತಾಲ್ಲೂಕಿನಲ್ಲಿ ₹ 2,548.76 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಆಗಿವೆ ಎಂದು ಕಾಂಗ್ರೆಸ್‌ ಮುಖಂಡರು ಗುರುವಾರದ ಜಾಹೀರಾತು ಪ್ರಕಟಿಸಿದ್ದರು. ಆದರೆ, ಬಹುಗ್ರಾಮಗಳ ಕುಡಿಯುವ ನೀರು ಯೋಜನೆಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕ ಬಿ.ಜಿ.ಗೋವಿಂದಪ್ಪ ಕಳೆದ 5 ವರ್ಷಗಳಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ₹ 4,200 ಕೋಟಿ ಅನುದಾನ ತಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಇದರಿಂದಾಗಿ ಶಾಸಕರು ಪತ್ರಿಕೆಯಲ್ಲಿ ಪ್ರಕಟಿಸಿರುವ ಜಾಹೀರಾತು ಮಾಹಿತಿ ಸರಿಯೊ ಅಥವಾ ಸಿಎಂ ಹೇಳಿರುವುದು ನಿಜವೊ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕಾಡತೊಡಗಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಸಿದ್ದರಾಮಯ್ಯ ಹೇಳಿರುವಂತೆ ತಾಲ್ಲೂಕಿನಲ್ಲಿ ₹ 4,200 ಕೋಟಿ ವೆಚ್ಚದ ಕಾಮಗಾರಿ ನಡೆದಿರುವುದು ಸತ್ಯವೇ ಆಗಿದ್ದರೆ ಸ್ಥಳೀಯ ಶಾಸಕರು ಶ್ವೇತಪತ್ರ ಹೊರಡಿಸಿ, ಸಾರ್ವಜನಿಕರಿಗೆ ನಿಖರ ಮಾಹಿತಿ ನೀಡಬೇಕು. ಇಲಾಖೆವಾರು ವಿವಿಧ ಕಾಮಗಾರಿಗಳಿಗೆ ತಂದಿರುವ ಅನುದಾನವೆಷ್ಟು? ಖರ್ಚು ಆಗಿರುವುದೆಷ್ಟು? ಫಲಾನುಭವಿಗಳು ಯಾರು? ಕಾಮಗಾರಿ ಯಾವ ಹಂತದಲ್ಲಿದೆ? ಎಂದು ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.