ADVERTISEMENT

ಇನ್ನೂ ಕೈಸೇರದ ತ್ರಿಚಕ್ರ ವಾಹನ

ಫಲಾನುಭವಿಯ ಪತ್ನಿ ಜಿಲ್ಲಾಡಳಿತಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 10:39 IST
Last Updated 16 ನವೆಂಬರ್ 2017, 10:39 IST

ಕಾರವಾರ: ‘ಅಂಗವಿಕಲ ಫಲಾನುಭವಿಗಳಿಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ತ್ರಿಚಕ್ರ ವಾಹನಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಿತ್ತು. ಆದರೆ ಆ ವಾಹನ ಇನ್ನೂ ನಮ್ಮ ಕೈಸೇರಿಲ್ಲ’ ಎಂದು ಮುಡಗೇರಿ ಹೊಸಾಳಿಯ ಫಲಾನುಭವಿ ನಯಾಜ್‌ ಸಯ್ಯದ್‌ ಅವರ ಪತ್ನಿ ಸಂಶಾ ಬುಧವಾರ ಜಿಲ್ಲಾಡಳಿತಕ್ಕೆ ದೂರು ನೀಡಿದರು.

ಪತಿ ನಯಾಜ್‌ ಅವರ ಕಾಲುಗಳು ಸ್ವಾಧೀನ ಇಲ್ಲ. ತ್ರಿಚಕ್ರ ವಾಹನಕ್ಕಾಗಿ ಒಂದು ವರ್ಷದ ಹಿಂದೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಅರ್ಜಿ ಹಾಕಲಾಗಿತ್ತು.

ಅದು ಮಾನ್ಯಗೊಂಡು ಕಳೆದ ನ.1ರಂದು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ತ್ರಿಚಕ್ರ ವಾಹನ ವಿತರಿಸಿದ್ದರು. ಆದರೆ ಅಧಿಕಾರಿಗಳು ಅದನ್ನು ಮನೆಗೆ ಕೊಂಡೊಯ್ಯಲು ನೀಡದೇ ‘ಎರಡು ದಿನಗಳು ಬಿಟ್ಟು ಕರೆ ಮಾಡಿ, ವಾಹನ ನೀಡುತ್ತೇವೆ’ ಎಂದಿದ್ದರು. ಇದೀಗ 15 ದಿನಗಳು ಕಳೆದರೂ ವಾಹನ ನೀಡಲು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ, ‘ನೀವು ಎಷ್ಟು ತಲೆ ತಿನ್ನುತ್ತೀರಾ? ನಾವು ಕರೆ ಮಾಡಿ ತಿಳಿಸುತ್ತೇವೆ. ಈಗ ವಾಹನ ಇಲ್ಲ’ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ದೂರಿದರು.

ವಾಟಾಳ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಘು ನಾಯ್ಕ ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.