ಉಜಿರೆ: ಬೆಂಗಳೂರಿನಲ್ಲಿ 350 ಹಾಸಿಗೆ ಸಾಮರ್ಥ್ಯದ ಆಯುರ್ವೇದ ಆಸ್ಪತ್ರೆ ಪ್ರಾರಂಭಗೊಂಡಿದ್ದು ಮುಂದಿನ ವರ್ಷ ಪೂರ್ಣ ಪ್ರಮಾಣದ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜು ಸೇವೆಗೆ ಸಜ್ಜಾಗಲಿವೆ. ಧರ್ಮಸ್ಥಳ ದಲ್ಲಿ ಯಾತ್ರಿಕರ ಅನುಕೂಲಕ್ಕಾಗಿ 520 ಕೊಠಡಿ ಗಳುಳ್ಳ ಹೊಸ ವಸತಿ ಛತ್ರ ನಿರ್ಮಾಣದ ಕಾಮಗಾರಿ ಈಗಾಗಲೇ ಪ್ರಾರಂಭಿಸಲಾಗಿದೆ. ಧಾರವಾಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಗೊಂಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಕಟಿಸಿದರು.
ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಶುಕ್ರವಾರ ನಡೆದ ಪಟ್ಟಾಭಿಷೇಕದ 47ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯದ 161 ಕೇಂದ್ರಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ರೈತರಿಗೆ ಕನಿಷ್ಠ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲಾಗುವುದು. ಗ್ರಾಮಾಭಿವೃದ್ಧಿ ಯೋಜನೆ ವತಿಯಂದ ಇದಕ್ಕಾಗಿ ₨20ಕೋಟಿ ಹಾಗೂ ರಾಜ್ಯ ಸರ್ಕಾರದ ವತಿಯಿಂದ ₨60 ಕೋಟಿ ಬಳಸಲಾಗುವುದು ಎಂದು ಹೆಗ್ಗಡೆಯವರು ಹೇಳಿದರು.
ಫ್ಲೋರೈಡ್ ಮುಕ್ತ ಕುಡಿಯುವ ನೀರು ಸರಬ ರಾಜಿಗಾಗಿ ರಾಜ್ಯದಲ್ಲಿ 365 ಘಟಕಗಳನ್ನು ಸದ್ಯ ದಲ್ಲಿಯೇ ಪ್ರಾರಂಭಿಸಲಾಗುವುದು. ಮದ್ಯವರ್ಜನ ಶಿಬಿರ, ಮಹಿಳಾ ಸಬಲೀಕರಣ ಮತ್ತು ಸ್ವಚ್ಛತಾ ಆಂದೋಲನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಶ್ರೀಸಾಮಾನ್ಯನಿಗೆ ರಾಜೋಪಚಾರ: ಧರ್ಮಸ್ಥಳ ದಲ್ಲಿ ಎಲ್ಲ ಸೇವಾ ಕಾರ್ಯಗಳಲ್ಲಿ ಜನಸಾಮಾನ್ಯರ ಸೇವೆಗೆ ಆದ್ಯತೆ ನೀಡಲಾಗುತ್ತದೆ. ಮಂಜುನಾಥ ಸ್ವಾಮಿಯ ಅನುಗ್ರಹದೊಂದಿಗೆ ಕ್ಷೇತ್ರದ ವರ್ಚಸ್ಸನ್ನು ಬಳಸಿ ಶ್ರೀಸಾಮಾನ್ಯನಿಗೆ ರಾಜೋಪಚಾ ರದೊಂದಿಗೆ ಅನೇಕ ಲೋಕ ಕಲ್ಯಾಣ ಕಾರ್ಯ ಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸ ಲಾಗಿದೆ. ಬದುಕಿನ ಪ್ರತಿಯೊಂದು ಕ್ಷಣವನ್ನೂ ನಾವು ಎಚ್ಚರಿಕೆಯಿಂದ ಬಳಸಬೇಕು ಎಂದು ಕಿವಿ ಮಾತು ಹೇಳಿದ ಹೆಗ್ಗಡೆ, ನೌಕರರು ಸತ್ಯ, ಧರ್ಮ, ನ್ಯಾಯದೊಂದಿಗೆ ನಿಷ್ಠೆಯಿಂದ ತನ್ನ ಕರ್ತವ್ಯವನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು.
* ಎಲ್ಲ 9 ಗ್ರಹಗಳಿಗಿಂತಲೂ ಅನು’ಗ್ರಹ’ ಮಿಗಿಲಾದುದು –ಭುವನಕೀರ್ತಿ ಸ್ವಾಮೀಜಿ ಕನಕಗಿರಿ |
ಅಧ್ಯಕ್ಷತೆ ವಹಿಸಿದ ಕನಕಗಿರಿ ಕ್ಷೇತ್ರದ ಭುವನಕೀರ್ತಿ ಸ್ವಾಮೀಜಿ ಮಾತನಾಡಿ ಭಗವಂತನ ಭಕ್ತಿ, ಉಪಾಸನೆ ಮಾಡಿದಾಗ, ದಾನ ಮಾಡಿದಾಗ ಮಾನಸಿಕ ಸುಖ-ಶಾಂತಿ ಮತ್ತು ನೆಮ್ಮದಿ ಲಭಿಸುತ್ತದೆ. ಧರ್ಮಾತ್ಮರ ಕೊರತೆ ಹಾಗೂ ಸೂಕ್ತ ಮಾರ್ಗದರ್ಶನದ ಅಭಾವ ದಿಂದಾಗಿ ಇಂದು ತೀರ್ಥ ಕ್ಷೇತ್ರಗಳು ಸಮಸ್ಯೆಗಳ ಆಗರ ವಾಗುತ್ತಿವೆ. ಆದರೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆತ್ಮವಿಶ್ವಾಸದಿಂದ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ ಆದರ್ಶ ಹಾಗೂ ಅನುಕರಣೀಯವಾಗಿವೆ. ಧರ್ಮಸ್ಥಳದ ನೌಕರರ ಸ್ವಾಮಿ ನಿಷ್ಠೆ ಮತ್ತು ಕರ್ತವ್ಯ ನಿಷ್ಠೆಯನ್ನು ಸ್ವಾಮೀಜಿ ಶ್ಲಾಘಿಸಿದರು.
ಹಿರಿಯ ನೌಕರರಾದ 13 ಮಂದಿಯನ್ನು ಹೆಗ್ಗಡೆ ಯವರು ಸನ್ಮಾನಿಸಿ ಅಭಿನಂದಿಸಿದರು ಸನ್ಮಾನಿತರ ಪರವಾಗಿ ರಮೇಶ ಹೆಬ್ಬಾರ್ ಕೃತಜ್ಞತೆ ವ್ಯಕ್ತಪಡಿಸಿದರು. ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಪ್ರೊ.ಎಸ್. ಪ್ರಭಾಕರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.