ADVERTISEMENT

ನಾಡಗೀತೆಯಾಗಿರುವ ಆತ್ಮಗೀತದಲ್ಲಿ ಬಹುತ್ವದ ದನಿಗಳೂ ಅಸಂಖ್ಯವಾಗಿವೆ: ನಾಗತಿಹಳ್ಳಿ ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 9:19 IST
Last Updated 1 ಡಿಸೆಂಬರ್ 2017, 9:19 IST
ನಾಡಗೀತೆಯಾಗಿರುವ ಆತ್ಮಗೀತದಲ್ಲಿ ಬಹುತ್ವದ ದನಿಗಳೂ ಅಸಂಖ್ಯವಾಗಿವೆ: ನಾಗತಿಹಳ್ಳಿ ಚಂದ್ರಶೇಖರ್
ನಾಡಗೀತೆಯಾಗಿರುವ ಆತ್ಮಗೀತದಲ್ಲಿ ಬಹುತ್ವದ ದನಿಗಳೂ ಅಸಂಖ್ಯವಾಗಿವೆ: ನಾಗತಿಹಳ್ಳಿ ಚಂದ್ರಶೇಖರ್   

ಮೂಡುಬಿದಿರೆ: ‘ಬಹುತ್ವವೆಂದರೇನು? ಅದು ಕೇವಲ ಬಾಹ್ಯರೂಪದ ವಿವಿಧ ಬಣ್ಣಗಳಲ್ಲ. ಅದು ಸೃಷ್ಟಿಯ ಸೋಜಿಗ ಕೂಡಾ. ಅಷ್ಟೇ ಅಲ್ಲ ಸೃಷ್ಟಿ ಕ್ರಿಯೆ ಮುಲಧಾತು. ಬಹುತ್ವದ ಬೀಜದಿಂದ ಅಖಂಡವಾದ ಅನನ್ಯವಾದ ಸೃಜನಶೀಲ ಅಭಿವ್ಯಕ್ತಿ ಟಿಸಿಲೊಡೆಯುಬಲ್ಲದು. ಅದು ಎತ್ತಣ ಮಾಮರದ ಮೇಲೆ ಎತ್ತಣಿಂದಲೋ ಬಂದು ಕುಳಿತ ಕೋಗಿಲೆ ಹಾಡಿನಂತೆ’ ಎಂದು ಆಳ್ವಾಸ್ ನುಡಿಸಿರಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿರುವ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

ಇಲ್ಲಿನ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಶುಕ್ರವಾರ ಆಳ್ವಾಸ್ ನುಡಿಸಿರಿ-2017 ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಸಮ್ಮೇಳನದ ಸರ್ವಾಧ್ಯಕ್ಷ ಭಾಷಣ ಮಾಡಿದರು.

‘ಬಹುತ್ವವೆನ್ನುವುದು ಸಾವಯವದ ಇನ್ನೊಂದು ಅರ್ಥ. ಪ್ರಾಚೀನರಲ್ಲೂ, ಆಧುನಿಕರಲ್ಲೂ ಇದು ಜೀವನ ಮೌಲ್ಯದ ಪ್ರಶ್ನೆಯಾಗಿಯೇ ಉಳಿದಿದೆ. ಅಲ್ಲಲ್ಲಿ ಸಂಘರ್ಷದ ಅಪರೂಪದ ಉದಾಹರಣೆಗಳು ಸಿಕ್ಕರೂ ಕನ್ನಡ ಮನಸ್ಸು ಆದಿಯಿಂದ ಬಹುತ್ವವನ್ನು ಪ್ರಕಟಿಸುತ್ತಾ, ಆರಾಧಿಸುತ್ತಾ, ಆಚರಿಸುತ್ತಾ, ಅದರಲ್ಲಿ ಸ್ವಸ್ಥಗೊಳ್ಳುತ್ತಾ, ಅದರ ವಿವೇಕವನ್ನು ಸಮಾಜಕ್ಕೆ ಹಂಚುತ್ತಾ ಬಂದಿದೆ. ಬಹುತ್ವವನ್ನು ನಿರಾಕರಿಸುವವರು ಬದುಕನ್ನೇ ನಿರಾಕರಿಸಿದಂತೆ’ ಎಂದರು.

ADVERTISEMENT

‘ಈ ಬಗೆಯ ನಿರಾಕರಣಕ್ಕೆ ಎಳಸಿದ ಸಮಾಜ ಘಾಸಿಗೊಳ್ಳುತ್ತದೆ ಗಾಯಗೊಳ್ಳುತ್ತದೆ. ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಉಂಟುಮಾಡಬಲ್ಲ ಇಂಥ ಗಾಯಗಳು ಸಮಾಜವನ್ನು ಶತಶತಮಾನದವರೆಗೆ ನೋಯಿಸುತ್ತದೆ. ಅನೇಕ ಜರ್ಮನ್ನರು ಈಗಲೂ ಹಿಟ್ಲರ್‌ನೊಂದಿಗೆ ಗುರುತಿಸಿಕೊಳ್ಳಲು ಹಿಂಜರಿಯುತ್ತಾರೆ. ತಾವು ಕರ್ಮಠವಲ್ಲವೆಂದು ಸಾಬೀತುಪಡಿಸಲು ಸಿರಿಯಾದ ಅಸಂಖ್ಯಾತ ನಿರ್ವಸತಿಗರಿಗೆ ಆಶ್ರಯ ಕೊಡುತ್ತಾರೆ. ವಲಸೆ ಎಂಬುದು ಹೊಸ ಕಾಲದಲ್ಲಿ ಬಹುತ್ವವನ್ನು ಮರುವಿಮರ್ಶೆಗೆ ಒಳಪಡಿಸುತ್ತದೆ. ಭಾರತ ಜನನಿಯ ತನುಜಾತೆಯಾದ ಕರ್ನಾಟಕ ಮಾತೆಯ ನಾಡಗೀತೆಯಾಗಿರುವ ಆತ್ಮಗೀತದಲ್ಲಿ ಬಹುತ್ವದ ದನಿಗಳೂ ಅಸಂಖ್ಯವಾಗಿವೆ ಮತ್ತು ಇದು ಅವಳ ಸೌಂದರ್ಯದ ಭಾಗವಾಗಿದೆ ಎಂದು ಆಶಯ ವ್ಯಕ್ತಪಸಿಸಿದರು.

ಕೋಮುವಾದ ಯಾವುದೆ ಧರ್ಮದಲ್ಲಿ ಇದ್ದರೂ ಖಂಡಿಸಬೇಕು; ಮೊಬೈಲ್‌ಗಳು ಅಣು ಬಾಂಬ್‌ಗಳಷ್ಟೇ ಅಪಾಯಕಾರಿ
‘ಕೋಮುವಾದ ಯಾವುದೆ ಧರ್ಮದಲ್ಲಿ ಇದ್ದರೂ ಖಂಡಿಸಬೇಕು. ಎಲ್ಲ ಧರ್ಮದಲ್ಲೂ ಕಡಿಮೆ‌ ಸಂಖ್ಯೆಯ ಕೆಟ್ಟವರು, ಹೆಚ್ಚಿನ ಸಂಖ್ಯೆಯ ಒಳ್ಳೆಯವರು ಇರುತ್ತಾರೆ. ಆದರೆ, ಕೆಟ್ಟವರು ಬಹುಬೇಗ ಒಗ್ಗೂಡುತ್ತಾರೆ’ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

‘ಈಗ ನಮ್ಮ ಕೈಗಳಲ್ಲಿರುವ ಮೊಬೈಲ್‌ಗಳು ಅಣು ಬಾಂಬ್‌ಗಳಷ್ಟೇ ಅಪಾಯಕಾರಿ. ಎಚ್ಚರ ತಪ್ಪಿದರೆ ಇವು ಬಾಂಬ್‌ಗಳಂತೆ ಸಮಾಜವನ್ನೇ ಸ್ಫೋಟಿಸುತ್ತವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.