ADVERTISEMENT

ನಿವೇಶನ ರಹಿತರ ಹೋರಾಟ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 7:31 IST
Last Updated 16 ಫೆಬ್ರುವರಿ 2017, 7:31 IST
ಸುರತ್ಕಲ್: ನಾಲ್ಕು ವರ್ಷದಿಂದ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿರುವ ನಿವೇಶನ ರಹಿತರ ಹೋರಾಟದ ಫಲವಾಗಿ ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎರಡು ಸಾವಿರ ಅರ್ಜಿ ಆಯ್ಕೆ ಮಾಡಲಾಗಿದೆ. ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಳೀಯ ಕಾರ್ಪೊರೇಟರ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಶಾಸಕರು ಪಟ್ಟಿ ಸಿದ್ಧಪಡಿಸಿದ ಕಾರಣ ಅನರ್ಹರೂ ಆಯ್ಕೆ ಆಗಿದ್ದಾರೆ ಎಂದು ಕಾರ್ಪೊರೇಟರ್ ದಯಾನಂದ್ ಶೆಟ್ಟಿ ಆರೋಪಿಸಿದರು.
 
ನಿವೇಶನ ರಹಿತರ ಹೋರಾಟ ಸಮಿತಿ ಮನಪಾ ಸುರತ್ಕಲ್ ಕಚೇರಿ ಎದುರು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
 
ಶಾಸಕ ಮೊಯಿದ್ದೀನ್‌ ಬಾವಾ ಅವರು ಕೇವಲ ಶಂಕು ಸ್ಥಾಪನೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಬಡವರ ಆಶಾಕಿರಣವಾದ ಆಶ್ರಯ ಯೋಜನೆ ಶಂಕು ಸ್ಥಾಪನೆಗೆ ಅವರಿಗಿನ್ನೂ ಸಮಯ ಸಿಕ್ಕಿಲ್ಲ ಎಂದು ಡಿವೈಎಫ್‍ಐ ಜಿಲ್ಲಾ ಉಪಾಧ್ಯಕ್ಷ ಇಮ್ತಿಯಾಜ್ ಹೇಳಿದರು.
 
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರ, ವಿಧವೆಯರ ಅರ್ಜಿಯನ್ನು ಮೊದಲು ಪರಿಗಣಿಸಿ ಆಯ್ಕೆ ಮಾಡಬೇಕು ಎನ್ನುವ ಸರ್ಕಾರದ ಸುತ್ತೋಲೆಗೆ ಗೌರವ ನೀಡದೆ ಈ ಮಾನ ದಂಡವನ್ನು ಬದಿಗಿಟ್ಟು ಅನರ್ಹರನ್ನು ಆಯ್ಕೆ ಮಾಡಲಾಗಿದೆ. ಈ ಲೋಪವನ್ನು ಕೂಡಲೇ ಸರಿ ಪಡಿಸದೇ ಹೋದರೆ ಮುಂದೆ ಕಾನೂನು ರೀತಿಯ ಹೋರಾಟ ಮಾಡಲಾಗುವುದು ಎಂದು ನಿವೇಶನ ರಹಿತರ ಹೋರಾಟ ಸಮಿತಿ ಕಾನೂನು ಸಲಹೆಗಾರ ಕೃಷ್ಣಪ್ಪ ಕೊಂಚಾಡಿ ಹೇಳಿ ದರು. ಪ್ರತಿಭಟನೆಗೆ ಮುನ್ನ ಹೋರಾಟ ಗಾರರು ಸುರತ್ಕಲ್ ಮಾರುಕಟ್ಟೆ ಬಳಿಯಿಂದ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.