ADVERTISEMENT

ಪ್ಲಾಸ್ಟಿಕ್ ಸೌಧಗಳಿಗೆ ಹಾನಿ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಮೇ 2017, 5:48 IST
Last Updated 18 ಮೇ 2017, 5:48 IST

ಸುಳ್ಯ: ನಗರದಲ್ಲಿರುವ ಪ್ಲಾಸ್ಟಿಕ್ ಸೌಧ ಗಳನ್ನು ಕಿಡಿಗೇಡಿಗಳು ಹಾನಿ ಮಾಡಿ ಧ್ವಂಸ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.

ಅಧ್ಯಕ್ಷೆ ಶೀಲಾವತಿ ಮಾಧವ ಗೌಡ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಯಿತು. ನಗರದಲ್ಲಿ ಕಸಗಳನ್ನು ಹಾಕಲು ಪ್ಲಾಸ್ಟಿಕ್ ಸೌಧಗಳನ್ನು ಹಾಕಲಾ ಗಿತ್ತು. ಆದರೆ ಗಾಂಧಿನಗರ ಪ್ರದೇಶದಲ್ಲಿ ಕಿಡಿಗೇಡಿಗಳು ಪ್ಲಾಸ್ಟಿಕ್ ಸೌಧಕ್ಕೆ ಹಾನಿ ಮಾಡಿದ್ದಾರೆ. ಇವರ ಬಗ್ಗೆ ಯಾವುದೇ ಕ್ರಮವನ್ನು ಇದೂವರೆಗೆ ಕೈಗೊಂಡಿಲ್ಲ ಎಂದು ಪ್ರಕಾಶ್ ಹೆಗ್ಡೆ ಪ್ರಶ್ನಿಸಿ ಕ್ರಮಕ್ಕೆ ಆಗ್ರಹಿಸಿದರು.

ನಗರದ ಚರಂಡಿಗೆ ಅಳವಡಿಸಿದ ಸ್ಲಾಬ್‌ಗಳು ತುಂಡಾಗಿ ಬೀಳುತ್ತಿದ್ದು, ಸಾರ್ವಜನಿಕರಿಗೆ ಪುಟ್‌ಪಾತ್ ಮೇಲೆ ನಡೆದು ಹೋಗಲು ಕಷ್ಟ ಆಗುತ್ತಿದೆ. ಅಂಗಡಿಯ ಮಾಲಕರು ಪುಟ್‌ಪಾತ್‌ ಅನ್ನು ತೆಗೆಯುತ್ತಿದ್ದಾರೆ ಎಂದು ಪ್ರಕಾಶ್ ಹೆಗ್ಡೆ ವಿವರಿಸಿದರು. ಉತ್ತರಿಸಿದ ಮುಖ್ಯಾಧಿಕಾರಿ ಚಂದ್ರಕುಮಾರ್ ಪ್ಲಾಸ್ಟಿಕ್ ಸೌಧ ಹಾನಿಗೆ ಪೊಲೀಸ್ ದೂರು ದಾಖಲಾಗಿದೆ. ಪೊಲೀಸರು ಸ್ಥಳೀಯ ಸಿಸಿ ಕ್ಯಾಮೆರಾಗಳ ವಿಡಿಯೊ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ. ಆದರೆ ಆರೋಪಿಗಳ ಪತ್ತೆ ಆಗಿಲ್ಲ ಎಂದರು.

ADVERTISEMENT

ಸದಸ್ಯ ಕೆ.ಎಸ್. ಉಮ್ಮರ್ ಪ್ಲಾಸ್ಟಿಕ್ ಸೌಧ ಹಾನಿಯಾದರ ಬಗ್ಗೆ ಮಾತ್ರ ಸಭೆ ಯಲ್ಲಿ ಚರ್ಚೆ ನಡೆಯುತ್ತಿದ್ದು, ನಗರದಲ್ಲಿ ಅಳವಡಿಸಿದ 4 ಪ್ಲಾಸ್ಟಿಕ್ ಸೌಧಗಳು ಕಾಣೆಯಾಗಿವೆ. ಈ ಬಗ್ಗೆ ಯಾರು ಮಾತನಾಡುತ್ತಿಲ್ಲ. ಅವರನ್ನು ಕೂಡ ಪತ್ತೆಹಚ್ಚಿ ಕ್ರಮಕೈಗೊಳ್ಳಬೇಕು. ಅಲ್ಲದೇ ನಗರ ಪಂಚಾಯತ್ ಅಳವಡಿಸಿದ ಸೋಲಾರ್ ಲೈಟ್‌ಗಳಿಂದ ಬ್ಯಾಟರಿಗಳ ಕಳವು ಆಗುತ್ತಿದೆ ಎಂದು ಹೇಳಿದರು.

‘ನಗರದಲ್ಲಿ ಮೂರು ಕಡೆ ಬಾಡಿಗೆ ಅಂಗಡಿ ಕೋಣೆಗಳಿದ್ದು, ಇವುಗಳನ್ನು 12 ವರ್ಷಗಳಿಗೊಮ್ಮೆ ಏಲಂ ಮಾಡ ಲಾಗುತ್ತಿತ್ತು. ಈ ಬಾರಿಗೆ ಅವಧಿ ಮುಗಿದಿದೆ. ಇದನ್ನು ಈಗ ಇದ್ದವರಿಗೆ ಮಾನವೀಯ ಆಧಾರದಲ್ಲಿ ನೀಡಬೇಕು’ ಎಂದು ಕೆ.ಎಂ.ಮುಸ್ತಫ ಆಗ್ರಹಿಸಿದರು.

‘ಅವಧಿ ಮುಗಿದ ಮೇಲೆ ಸರ್ಕಾರ ಮರು ಏಲಂ ಮಾಡಬೇಕು ಎಂದು ಸುತ್ತೋಲೆ ನೀಡಿದ್ದಾರೆ’ ಎಂದು ಮುಖ್ಯಾಧಿಕಾರಿ ಹೇಳಿದರು. ಮಾನ ವೀಯ ದೃಷ್ಟಿಯನ್ನು ನೋಡಿಕೊಂಡು ಸೂಕ್ತ ಕ್ರಮ ಮತ್ತೇ ಬಾಡಿಗೆ ಏರಿಸುವ ಬಗ್ಗೆ ತೀರ್ಮಾಣ ಮಾಡಬಹುದು’ ಎಂದು ಕೆ.ಎಂ. ಮುಸ್ತಫ ಹೇಳಿದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅದ್ಯಕ್ಷ ಕಿರಣ್ ಕುರುಂಜಿ, ಎಂಜಿನಿಯರ್ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.