ಸುಬ್ರಹ್ಮಣ್ಯ: ಬಾಳುಗೋಡು ಗ್ರಾಮಗಳನ್ನು ಪುಷ್ಪಗಿರಿ ವನ್ಯಧಾಮಕ್ಕೆ ಸೇರ್ಪಡೆಗೊಳಿಸುವುದನ್ನು ವಿರೋಧಿಸಿ ಪರಿಸರಕ್ಕೆ ಬಂದಿದ್ದ ವನ್ಯಜೀವಿ ಅಧಿಕಾರಿಗಳ ವಾಹನವನ್ನು ಗ್ರಾಮಸ್ಥರು ಬಾಳುಗೋಡು ಗ್ರಾಮದ ಕುಡುಮುಂಡೂರು ಬಳಿ ಶುಕ್ರವಾರ ತಡೆ ಹಿಡಿದರು.
ಪುಷ್ಪಗಿರಿ ವೈಲ್ಡ್ಲೈಫ್ ಪ್ರೊಬೆಷನರಿ ಆರ್ಎಫ್ಒ ಮರಿಸ್ವಾಮಿ ಸೇರಿ ಜತೆಯಲ್ಲಿ ಇಬ್ಬರು ಫಾರೆಸ್ಟ್, ಇಬ್ಬರು ಗಾರ್ಡ್ ಹಾಗೂ ಒಬ್ಬ ಚಾಲಕರಿಗೆ ದಿಗ್ಬಂಧನ ಹಾಕಿದ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಅಧಿಕಾರಿಗಳನ್ನು ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಡಿಎಫ್ಒ ಬಂದು ತಮ್ಮ ಸಮಸ್ಯೆ ಇತ್ಯರ್ಥಗೊಳಿಸುವವರೆಗೂ ಅಧಿಕಾರಿಗಳನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಕಸ್ತೂರಿ ರಂಗನ್ ವರದಿ, ಆನೆ ಕಾರಿಡಾರ್, ಗ್ರೇಟರ್ ತಲಕಾವೇರಿ, ಗಾಡ್ಗೀಳ್ ವರದಿ , ಪುಷ್ಪಗಿರಿ ವನ್ಯಧಾಮದ ಬಳಿಕ ಇದೀಗ ಸೂಕ್ಷ್ಮಪರಿಸರ ವಲಯದ ಗುಮ್ಮ ಅರಣ್ಯದಂಚಿನ ಪ್ರದೇಶದ ಜನರಿಗೆ ಆವರಿಸಿದ್ದು, ಇದರ ಪರಿಣಾಮ ತಾಲ್ಲೂಕಿನ ಕಲ್ಮಕಾರು ಹಾಗೂ ಬಾಳುಗೋಡು ಗ್ರಾಮಗಳನ್ನು ಪುಷ್ಪಗಿರಿ ವನ್ಯಧಾಮಕ್ಕೆ ಸೇರ್ಪಡೆಗೊಳಿಸುವುದನ್ನು ವಿರೋಧಿಸಿ ಇಲ್ಲಿನ ಐದು ಗ್ರಾಮಗಳ ಗ್ರಾಮಸ್ಥರು ನಿರಂತರ ಪ್ರತಿಭಟನೆ ಮಾಡುತ್ತಿದ್ದು, ಕೆಲವು ದಿನಗಳ ಹಿಂದೆ ಕೊಲ್ಲಮೊಗ್ರವಿನಲ್ಲಿ ನಡೆದ ಅರಣ್ಯ ಅಧಿಕಾರಿಗಳ ಹಾಗೂ ಗ್ರಾಮಸ್ಥರ ನಡುವೆ ನಡೆದ ಜನಸಂಪರ್ಕ ಸಭೆಯಲ್ಲಿ ಪುಷ್ಪಗಿರಿ ಸೂಕ್ಷ್ಮ ಪ್ರದೇಶದಿಂದ ಹೊರಗಿಡುವವರೆಗೂ ಈ ಗ್ರಾಮಗಳಿಗೆ ಅಧಿಕಾರಿಗಳನ್ನು ಬರಲು ಬಿಡುವುದಿಲ್ಲ ಎನ್ನುವ ಪತಿಜ್ಞೆಯನ್ನು ಕೂಡ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.