ಮಂಗಳೂರು: ಆಹಾರ ಪದಾರ್ಥಗಳು ಕಲುಷಿತವಾಗುತ್ತಿರುವ ಇಂದಿನ ದಿನಗಳಲ್ಲಿ, ಸಾವಯವ ಆಹಾರಕ್ಕೆ ಹೆಚ್ಚಿನ ಬೇಡಿಕೆ ಎದುರಾಗಿದೆ. ರಾಸಾ ಯನಿಕದಿಂದ ಮುಕ್ತವಾಗಿರುವ ಆಹಾರ ಸೇವಿಸುವುದರಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.
ನಗರದ ಕರಂಗಲ್ಪಾಡಿ ಬಳಿ ಬುಧವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಹಾಪ್ಕಾಮ್ಸ್ನ ಸಾವಯವ ಅಮೃತ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಆಹಾರ ಪದಾರ್ಥಗಳು ವಿಷಯುಕ್ತ ಆಗುತ್ತಿವೆ. ಯಾವುದೇ ಆಹಾರವನ್ನು ಸೇವಿಸುವ ಮೊದಲು ಸಾಕಷ್ಟು ವಿಚಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಪೀಳಿಗೆಗೆ ಒಳ್ಳೆಯ ಆರೋಗ್ಯವನ್ನು ನೀಡಬೇಕಾದಲ್ಲಿ, ಸಾವಯವ ಆಹಾರದ ಬಳಕೆ ಅನಿವಾರ್ಯ ಎಂದರು.
ಪ್ರಮುಖವಾಗಿ ನಗರ ಪ್ರದೇಶದ ಜನರಿಗೆ ಒಳ್ಳೆಯ ತರಕಾರಿ, ಕಾಳುಗಳ ಕೊರತೆ ಕಾಡುತ್ತಿದೆ. ಹಾಪ್ಕಾಮ್ಸ್ನ ಅಮೃತ ಮಳಿಗೆ ಈ ಕೊರತೆಯನ್ನು ನೀಗಿಸುವಲ್ಲಿ ಯಶಸ್ವಿಯಾಗಲಿದೆ ಎಂದು ಹೇಳಿದರು.
ಸಿರಿಧಾನ್ಯ ವಿಭಾಗವನ್ನು ಉದ್ಘಾಟಿಸಿದ ರಾಷ್ಟ್ರೀಯ ಸಹಕಾರ ಭಾರತಿ ಉಪಾಧ್ಯಕ್ಷ ಕೊಂಕೋಡಿ ಪದ್ಮನಾಭ್ ಮಾತನಾಡಿ, ವಿಷದಿಂದ ಮುಕ್ತವಾಗಿರುವ ಆಹಾರ ಇಂದಿನ ಅಗತ್ಯವಾಗಿದೆ. ಅನೇಕ ಕಾಯಿಲೆಗಳಿಗೆ ಇಂತಹ ಆಹಾರವೇ ಕಾರಣವಾಗಿದೆ. ಒಳ್ಳೆಯ ಆರೋಗ್ಯಕ್ಕೆ ಸಾವಯವ ಆಹಾರ ಸೇವನೆ ಮಾಡಬೇಕು ಎಂದರು.
ಅಮೃತ ಮಳಿಗೆಯ ಮೂಲಕ ರೈತರ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗಬೇಕು. ಜತೆಗೆ ಗ್ರಾಹಕರಿಗೂ ಅಗ್ಗದ ಬೆಲೆಯಲ್ಲಿ ಪೌಷ್ಟಿಕ ಆಹಾರ ಪದಾರ್ಥ ದೊರೆಯಬೇಕು ಎಂದು ಹೇಳಿದರು.
ಮಳಿಗೆಯ ಸಾವಯವ ತರಕಾರಿ ವಿಭಾಗವನ್ನು ಕರ್ನಾಟಕ ತೋಟ ಗಾರಿಕಾ ಮಹಾಮಂಡಳದ ಅಧ್ಯಕ್ಷ ಬಸವರಾಜ ಆರ್. ಪಾಟೀಲ, ಪತಂಜಲಿ ಉತ್ಪನ್ನಗಳ ವಿಭಾಗವನ್ನು ಪಾಲಿಕೆ ಸದಸ್ಯ ಡಿ.ಕೆ. ಅಶೋಕ್ ಉದ್ಘಾಟಿಸಿದರು.
ದಕ್ಷಿಣ ಕನ್ನಡ –ಉಡುಪಿ ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಲಕ್ಷ್ಮಿನಾರಾಯಣ ಉಡುಪ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸ್ಕಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ದಯಾನಂದ ಅಡ್ಯಾರ್, ಅನಿಲ್ರಾಜ್ ಡಿ.ಎಂ., ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.