ADVERTISEMENT

ಸಿಐಡಿ ತನಿಖೆ ಆರಂಭ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 9:51 IST
Last Updated 23 ಏಪ್ರಿಲ್ 2017, 9:51 IST

ಮಂಗಳೂರು: ಪ್ರಕಾಶ್ ಪೂಜಾರಿ ಎಂಬುವವರ ಕೊಲೆಯತ್ನ ಪ್ರಕರಣದಲ್ಲಿ ಬಂಧಿತನಾಗಿರುವ ಕಾಟಿಪಳ್ಳದ ಅಹಮ್ಮದ್ ಖುರೇಶಿ ಎಂಬಾತನ ಮೇಲೆ ನಗರ ಅಪರಾಧ ಪತ್ತೆದಳದ (ಸಿಸಿಬಿ) ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪದ ಕುರಿತು ಸಿಐಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಸಿಐಡಿ ಎಸ್‌ಪಿ ಸಿರಿಗೌರಿ ನೇತೃತ್ವದ ತಂಡಕ್ಕೆ ಪ್ರಕರಣದ ತನಿಖೆಯ ಹೊಣೆ ಒಪ್ಪಿಸಲಾಗಿದೆ.

ಶುಕ್ರವಾರ ನಗರಕ್ಕೆ ಬಂದಿರುವ ತನಿಖಾ ತಂಡ ಪಣಂಬೂರಿನ ಎನ್‌ಎಂಪಿಟಿ ಅತಿಥಿ ಗೃಹದಲ್ಲಿ ಕಚೇರಿ ತೆರೆದಿದೆ. ಖುರೇಶಿಯ ಅಣ್ಣ ನಿಶಾದ್‌ ಅವರನ್ನು ಶುಕ್ರವಾರ ಕಚೇರಿಸಿಕೊಂಡ ತಂಡ, ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ನಡೆಸಿದೆ. ಖುರೇಶಿ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಆರೋಪ ಮಾಡಿರುವ ಕೆಲ ಪ್ರಮುಖರನ್ನೂ ವಿಚಾರಣೆಗೆ ಹಾಜರಾಗುವಂತೆ ತನಿಖಾ ತಂಡ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ದೌರ್ಜನ್ಯ ನಡೆಸಿರುವ ಆರೋಪಕ್ಕೆ ಗುರಿಯಾಗಿರುವ ಸಿಸಿಬಿ ಇನ್‌ಸ್ಪೆಕ್ಟರ್ ಸುನೀಲ್ ವೈ. ನಾಯಕ್, ಸಬ್‌ ಇನ್‌ಸ್ಪೆಕ್ಟರ್ ಶ್ಯಾಮ್‌ಸುಂದರ್‌, ಅವರ ಜೊತೆಗಿದ್ದ ಸಿಬ್ಬಂದಿ ಮತ್ತು ನಗರ ಪೊಲೀಸ್ ಕಮಿಷನರೇಟ್‌ನ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳನ್ನೂ ವಿಚಾರಣೆ ನಡೆಸಲು ತನಿಖಾ ತಂಡ ಸಿದ್ಧತೆ ನಡೆಸಿದೆ.

ADVERTISEMENT

ಖುರೇಶಿಯ ಬಂಧನ, ನ್ಯಾಯಾಲ ಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಆತ ನೀಡಿದ್ದ ಹೇಳಿಕೆ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ನಡೆದ ಬೆಳವಣಿಗೆಗಳು, ಆಸ್‍ಪತ್ರೆಯಲ್ಲಿ ಚಿಕಿತ್ಸೆ ನೀಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ತನಿಖಾ ತಂಡ ಕಲೆ ಹಾಕುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.