ADVERTISEMENT

ಸ್ಥಗಿತಕ್ಕೆ ಆದೇಶ, ಕಲ್ಲು ತೆರವಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 8:42 IST
Last Updated 21 ಮೇ 2017, 8:42 IST

ಉಪ್ಪಿನಂಗಡಿ: ಬಾರ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಳೀಕಟ್ಟೆ ಗೋವಿಂದರಗುಳಿ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಶನಿವಾರ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಣಿಗಾರಿಕೆ ಸ್ಥಗಿತ ಮಾಡುವಂತೆ ಕಂದಾಯ ಇಲಾಖೆ ಸೂಚನೆ ನೀಡಿದೆ,ತನ್ನ ಜಾಗದೊಳಗೆ ರಾಶಿ ಹಾಕಿರುವ ಕಲ್ಲುಗಳನ್ನು ತೆರವು ಮಾಡುವಂತೆ ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಸರಳಿಕಟ್ಟೆ ಗೋವಿಂದರಗುಳಿ ಎಂಬಲ್ಲಿ ಬೃಹತ್ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿರುವ ಕಂದಾಯ ಇಲಾ ಖೆಯ ಬಾರ್ಯ ಗ್ರಾಮ ಕರಣಿಕರಾದ ಸಾಕಮ್ಮ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲಸ ಸ್ಥಗಿತಗೊಳಿ ಸುವಂತೆ ಸೂಚನೆ ನೀಡಿದರು.

ಪರವಾನಗಿ ಪಡೆದಿಲ್ಲ: ಸಾಕಮ್ಮ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಇಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಪರವಾನಗಿ ಪಡೆದಿರುವುದಿಲ್ಲ. ಆದರೆ ಪಟ್ಟಾ ಜಾಗದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಅದರ ಮಾಲೀಕರು ಮಂಗಳೂರಿನಲ್ಲಿದ್ದು, ದಾಖಲೆಗಳನ್ನು ತಂದೊಪ್ಪಿಸಲು ತಿಳಿಸಿದ್ದೇನೆ. ಬಳಿಕ ಈ ಬಗ್ಗೆ ಮೇಲಧಿಕಾರಿಗೆ ವರದಿ ಸಲ್ಲಿಸಲಾಗುವುದು’ ಎಂದರು.

ADVERTISEMENT

ಕಲ್ಲುಗಳ ತೆರವು: ಗಣಿಗಾರಿಕೆಯಲ್ಲಿ ಒಡೆದು ತೆಗೆದ ಕಲ್ಲುಗಳನ್ನು ಅದರ ಪಕ್ಕದಲ್ಲಿರುವ ಗೇರು ಅಭಿವೃದ್ಧಿ ನಿಗಮದ ಜಾಗದ ಒಳಗೆ ರಾಶಿ ಹಾಕಲಾಗಿತ್ತು. ನಿಗಮದ ಅರಣ್ಯ ರಕ್ಷಕ ಸುಧೀರ್ ಮತ್ತು ಅರಣ್ಯ ವೀಕ್ಷಕ ನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಹಾಕಿರುವುದನ್ನು ತಕ್ಷಣವೇ ತೆರವು ಮಾಡುವಂತೆ ಸೂಚನೆ ನೀಡಿದರು. ಅದರಂತೆ ಕಲ್ಲುಗಳನ್ನು ಅಲ್ಲಿಂದ ತೆರವು ಮಾಡುತ್ತಿರುವುದು ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.