ADVERTISEMENT

‘18 ಕಡೆಗಳಲ್ಲಿ ನೇತ್ರಾವತಿ ನದಿಗೆ ಕಲುಷಿತ ನೀರು’

ಬಿಜೆಪಿ ನಿಯೋಗದಿಂದ ಬಂಟ್ವಾಳ ಸುತ್ತ ನೇತ್ರಾವತಿ ನದಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 9:48 IST
Last Updated 9 ಮಾರ್ಚ್ 2017, 9:48 IST
ಮಂಗಳೂರು: ಒಳಚರಂಡಿಯ ವ್ಯವ ಸ್ಥೆಯ ಕೊರತೆಯಿಂದಾಗಿ ಕಲುಷಿತ ನೀರೆಲ್ಲವೂ ನಗರಕ್ಕೆ ನೀರು ಪೂರೈಸುವ ನೇತ್ರಾವತಿ ಒಡಲು ಸೇರುತ್ತಿದೆ. ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರವಾದ ಬಂಟ್ವಾಳದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಕಲುಷಿತ ನೀರನ್ನು ನದಿಗೆ ಬಿಡಲಾಗುತ್ತಿದೆ.
 
ಬುಧವಾರ ಉಪಮೇಯರ್‌ ಸುಮಿತ್ರ ಕೆ. ನೇತೃತ್ವದ ಬಿಜೆಪಿ ನಿಯೋಗ ಬಂಟ್ವಾಳದ ವಿವಿಧೆಡೆ ನೇತ್ರಾವತಿ ನದಿ ತೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳಿವು. 
 
ಕೆಲವು ದಿನಗಳ ಹಿಂದಷ್ಟೇ ಮಾಜಿ ಸಚಿವ ಕೃಷ್ಣ ಪಾಲೇಮಾರ್‌ ನೇತೃತ್ವದ ನಿಯೋಗವು ‘ಸುಮಾರು 18 ಕಡೆಗಳಲ್ಲಿ ನೇತ್ರಾವತಿ ನದಿಗೆ ಕಲುಷಿತ ನೀರು ಸೇರ್ಪಡೆ ಆಗುತ್ತಿದೆ. ಈ ನೀರಿನಲ್ಲಿ ಕೋಲಿಫಾರ್ಮ್‌ ಬ್ಯಾಕ್ಟೀರಿಯಾ ಇರುವುದು ಪ್ರಯೋಗಾಲಯದ ವರದಿಯಿಂದ ಬಹಿರಂಗವಾಗಿದೆ ಎಂದು ತಿಳಿಸಿದ್ದರು.
 
ಈ ಬಗ್ಗೆ ಜಂಟಿ ಸಮೀಕ್ಷೆ ನಡೆಸು ವಂತೆ ಪಾಲಿಕೆ ಪ್ರತಿಪಕ್ಷದ ಸದಸ್ಯರು, ಮೇಯರ್‌ ಅವರನ್ನು ಒತ್ತಾಯಿಸಿದ್ದರು. ಇದಕ್ಕೆ ಮೇಯರ್‌ ಹರಿನಾಥ್‌ ಸಮ್ಮತಿ ಸಿದ್ದರೂ, ಭೇಟಿ ಮಾತ್ರ ಸಾಧ್ಯವಾಗಲಿಲ್ಲ.
 
ಈ ಹಿನ್ನೆಲೆಯಲ್ಲಿ ಬುಧವಾರ ಮತ್ತೊಮ್ಮೆ ಪರಿಶೀಲನೆ ನಡೆಸಲು ಬಿಜೆಪಿ ಸದಸ್ಯರ ನಿಯೋಗ ನೇತ್ರಾವತಿ ನದಿ ತೀರಕ್ಕೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ಹಲವಾರು ಕಡೆಗಳಲ್ಲಿ ಇನ್ನೂ ಕಲುಷಿತ ನೀರು ನೇತ್ರಾವತಿ ನದಿಯನ್ನು ಸೇರುತ್ತಿರುವುದು ಕಂಡು ಬಂತು. ಬಂ ಟ್ವಾಳ ಸುತ್ತಲಿನ 18 ಕಡೆಗಳಲ್ಲಿ ಕಲುಷಿತ ನೀರು ನದಿಗೆ ಸೇರುತ್ತಿರುವುದನ್ನು ಬಿಜೆಪಿ ಸದಸ್ಯರು ಪರಿಶೀಲಿಸಿದರು. 
 
ಬಂಟ್ವಾಳ ಪುರಸಭೆಯ ಅಟಲ್‌ ಬಿಹಾರಿ ವಾಜಪೇಯಿ ವಾಣಿಜ್ಯ ಸಂಕೀರ್ಣದ ಹಿಂಭಾಗದಲ್ಲಿಯೇ ಕಲುಷಿತ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಘನ ತ್ಯಾಜ್ಯಗಳೂ ಸರಾಗವಾಗಿ ನದಿಯ ಒಡಲು ಸೇರುತ್ತಿರುವುದು ಕಂಡು ಬಂತು. 
 
ನಿಯೋಗದ ಭೇಟಿಯ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಸ್ಥಳೀಯ ಜನರು, ಹಲವಾರು ಕಡೆಗಳಲ್ಲಿ ತ್ಯಾಜ್ಯ ನೀರನ್ನು ನದಿಗೆ ಬಿಡುತ್ತಿರುವ ಬಗ್ಗೆ ದೂರಿದರು. ಕೆಲವು ಕಡೆಗಳಲ್ಲಿ ಕೋಳಿತ್ಯಾಜ್ಯ ಮತ್ತು ಮೀನಿನ ತ್ಯಾಜ್ಯವನ್ನೂ ನದಿಗೆ ಹಾಕಲಾ ಗುತ್ತಿದೆ ಎಂದು ದೂರಿದರು. ಸ್ಥಳ ಪರಿ ಶೀಲನೆ ಮಾಡುತ್ತ ಹೋದಂತೆ, ನದಿಗೆ ಕಲುಷಿತ ನೀರಿನ ಸೇರ್ಪಡೆ ಅವ್ಯಾಹತವಾಗಿ ನಡೆಯುತ್ತಿರುವುದು ಬೆಳಕಿಗೆ ಬಂತು. 
 
ನನೆಗುದಿಗೆ ಬಿದ್ದ ತ್ಯಾಜ್ಯ ಸಂಸ್ಕರಣಾ ಘಟಕ: ಬಂಟ್ವಾಳದಲ್ಲಿ ಪ್ರಮುಖವಾಗಿ ತ್ಯಾಜ್ಯ ಸಂಸ್ಕರಣಾ ಘಟಕ ಇಲ್ಲದೇ ಇರುವುದರಿಂದ ಕಲುಷಿತ ನೀರೆಲ್ಲ ನದಿಯ ಪಾಲಾಗುತ್ತಿದೆ. ಬಂಟ್ವಾಳದಲ್ಲಿ ₹35 ಕೋಟಿ ವೆಚ್ಚದಲ್ಲಿ ಘಟಕ ಸ್ಥಾಪನೆಗೆ 2003 ರಲ್ಲಿಯೇ ಮಂಜೂರಾತಿ ದೊರೆ ತಿದೆ. ಜಮೀನು ಸ್ವಾಧೀನ ಪ್ರಕ್ರಿಯೆ ಪೂರ್ಣ ಆಗದೇ ಇರುವುದರಿಂದ ಘಟ ಕದ ಸ್ಥಾಪನೆ ಇದುವರೆಗೆ ಸಾಕಾರವಾ ಗುತ್ತಿಲ್ಲ ಎಂದು ಬಿಜೆಪಿ ಮಂಗಳೂರು ದಕ್ಷಿಣ ಘಟಕದ ಅಧ್ಯಕ್ಷ ವೇದವ್ಯಾಸ್‌ ಕಾಮತ್‌ ಆರೋಪಿಸಿದರು. 
 
ವಿಧಾನ ಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ಬಂಟ್ವಾಳದಲ್ಲಿ ಕೆಲವೇ ಕೆಲವು ಮ್ಯಾನ್‌ ಹೋಲ್‌ಗಳನ್ನು ನಿರ್ಮಿಸಲಾಗಿದೆ. ಅದರ ಹೊರತಾಗಿ ಒಳಚರಂಡಿ, ಮಳೆ ನೀರು ಚರಂಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ನೇತ್ರಾವತಿ ನದಿಯ ನೀರು ಕಲುಷಿತವಾಗುತ್ತಿದೆ. ಇದೇ ನೀರನ್ನು ಮಂಗಳೂರು ನಗರ ಸೇರಿದಂತೆ ಉಳ್ಳಾಲ, ಮೂಲ್ಕಿ ಅರೇಕಳ ಹಾಗೂ ಅಡ್ಯಾರಗಳಿಗೆ ಪೂರೈಸಲಾ ಗುತ್ತಿದೆ ಎಂದು ದೂರಿದರು. 
 
ಪಾಲಿಕೆ ಪ್ರತಿಪಕ್ಷದ ನಾಯಕಿ ರೂಪಾ ಡಿ. ಬಂಗೇರಾ ಮಾತನಾಡಿ, ಕಲುಷಿತ ನೀರಿನ ಬಗ್ಗೆ ಮೇಯರ್ ಹರಿನಾಥ್‌ ಅವರ ಗಮನ ಸೆಳೆಯಲಾಗಿದೆ. ನದಿ ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀ ರಿಯಾ ಇರುವ ಬಗ್ಗೆ ಪ್ರಯೋಗಾಲಯದ ವರದಿಯನ್ನೂ ಸಲ್ಲಿಸಲಾಗಿದೆ. ಜಂಟಿ ಸಮೀಕ್ಷೆ ನಡೆಸುವುದಾಗಿ ಭರವಸೆ ನೀಡಿದ್ದ ಮೇಯರ್‌ ಹರಿನಾಥ ಅವರು, ಅದನ್ನೂ ಮಾಡಲಿಲ್ಲ.  ನಗರದ ಜನರು ಕಲುಷಿತ ನೀರು ಕುಡಿಯುವಂ ತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

* ಕಲುಷಿತ ನೀರು ನದಿಗೆ ಸೇರ್ಪಡೆ ಆಗುತ್ತಿರುವ ಬಗ್ಗೆ ಮೇಯರ್ ಹರಿನಾಥ ಅವರ ಗಮನ ಸೆಳೆದಿದ್ದರೂ, ಅವರು ಮೌನ ವಹಿಸಿದ್ದಾರೆ.
ರೂಪಾ ಡಿ. ಬಂಗೇರಾ, ಪಾಲಿಕೆ ಪ್ರತಿಪಕ್ಷದ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.