ಮಂಗಳೂರು: ರಾಷ್ಟ್ರೀಯ ಹೆದ್ದಾರಿ-48 ಬೆಂಗಳೂರು- ಮಂಗಳೂರು ರಸ್ತೆಯ ಶಿರಾಡಿ ಘಾಟಿ ಭಾಗದ ಕೆಂಪುಹೊಳೆ ಗೆಸ್ಟ್ ಹೌಸ್ನಿಂದ ಅಡ್ಡಹೊಳೆರವರೆಗಿನ ರಸ್ತೆ ಕಾಂಕ್ರಿಟೀಕರಣಕ್ಕೆ ಸಿದ್ಧತೆ ಆರಂಭವಾಗಿದ್ದು, ಶನಿವಾರ (ಇದೇ 20) ಬೆಳಿಗ್ಗೆ 6 ಗಂಟೆಯಿಂದ ಕಾಮಗಾರಿ ಮುಕ್ತಾಯ ಆಗುವವರೆಗೆ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ.
ಮಾರನಹಳ್ಳಿ ಪೊಲೀಸ್ ಔಟ್ ಪೋಸ್ಟ್ ಕಾಡುಮನೆ ಎಸ್ಟೇಟ್ ರೋಡ್ ಜಂಕ್ಷನ್ನಿಂದ ಪುತ್ತೂರು ತಾಲ್ಲೂಕಿನ ಗುಂಡ್ಯ ಸಮೀಪದ ಅಡ್ಡಹೊಳೆಯವರೆಗೆ ಕಾಮಗಾರಿ ನಡೆಯಲಿದೆ.
ಇದರಿಂದಾಗಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಭಾರಿ ವಾಹನ 139 ಕಿ.ಮೀ. ಹೆಚ್ಚುವರಿ ದೂರವನ್ನು ಕ್ರಮಿಸಬೇಕಾಗಿದೆ. ಲಘು ವಾಹನಗಳು ಚಾರ್ಮಾಡಿ ಘಾಟಿಯ ಮೂಲಕ ಸಂಚರಿಸಲಿದ್ದು, 20 ಕಿ.ಮೀ. ಹೆಚ್ಚುವರಿ ದೂರ ಪ್ರಯಾಣಿಸಬೇಕಾಗಿದೆ.
ರಾಜಹಂಸ, ಐರಾವತ, ಖಾಸಗಿ ಲಕ್ಸುರಿ ಬಸ್ಗಳು, ಬುಲೆಟ್ ಟ್ಯಾಂಕ ರ್ಗಳು, ಶಿಪ್ ಕಾರ್ಗೊ ಕಂಟೇನರ್, ಉದ್ದ ಚೆಸ್ಸಿಸ್ ವಾಹನಗಳು ಮಂಗಳೂರಿ ನಿಂದ ಬಿ.ಸಿ. ರಸ್ತೆ, ಮಾಣಿ, ಪುತ್ತೂರು, ಮಡಿಕೇರಿ, ಹುಣಸೂರು, ಕೆ.ಆರ್.ನಗರ, ಹೊಳೆನರಸೀಪುರ, ಹಾಸನದ ಮೂಲಕ ಬೆಂಗಳೂರು ಸೇರಬೇಕು. ಹೀಗಾಗಿ ಬೆಂಗಳೂರಿನ ಪ್ರಯಾಣ ಮೂರ್ನಾಲ್ಕು ಗಂಟೆ ವಿಳಂಬವಾಗುವ ಸಾಧ್ಯತೆ ಇದೆ.
ಲಘು ವಾಹನ ಮಂಗಳೂರಿನಿಂದ ಬಿಸಿ. ರೋಡ್, ಬೆಳ್ತಂಗಡಿ, ಉಜಿರೆ, ಚಾರ್ಮಾಡಿ ಘಾಟಿ, ಮೂಡಿಗೆರೆ, ಬೇಲೂರು, ಹಾಸನ ಮೂಲಕ ಬೆಂಗಳೂರಿಗೆ ತೆರಳಬೇಕಾಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಈಗಾಗಲೇ ರಾತ್ರಿ ರೈಲು ಸೇವೆ ಆರಂಭಿ ಸಲಾಗಿದೆ. ಜತೆಗೆ ವಿಮಾನ ಸೌಲಭ್ಯವಿದೆ. ಅದಾಗ್ಯೂ ಬಹುತೇಕ ಜನ, ಬಸ್ ಮೂಲಕವೇ ಪ್ರಯಾಣಿಸುತ್ತಿದ್ದು, ಹೈಕೋರ್ಟ್, ವಿಧಾನಸಭೆ ಸಚಿವಾ ಲಯದ ಕೆಲಸಗಳಿಗೆ ತೆರಳುವ ಜನರು, ಮುಂಚಿತವಾಗಿ ಹೊರಡಬೇಕಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.