ADVERTISEMENT

‘ಕಾವಿ ಕಳಚಿ ಕ್ಷಮೆಯಾಚಿಸಿ’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 6:27 IST
Last Updated 7 ನವೆಂಬರ್ 2017, 6:27 IST

ದಾವಣಗೆರೆ: ವೀರಶೈವ ಸಮಾಜದ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಸಿರುವ ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಶ್ರೀಗಳು ಕಾವಿ ಕಳಚಿ ಬೇಷರತ್ ಸಮುದಾಯದ ಕ್ಷಮೆಯಾಚಿಸಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡ ಲೋಕೇಶ್‌ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖಾವಿಧಾರಿಗಳ ಬಗ್ಗೆ ಅಪಾರವಾದ ಗೌರವ ಇದೆ. ದೇವರ ಸ್ವರೂಪವಾಗಿ ಕಾಣಲಾಗುತ್ತಿದೆ. ಅಂಥವರೇ ಅವಾಚ್ಯವಾಗಿ ಮಾತನಾಡಿದರೆ ಸಮಾಜ ಯಾರನ್ನು ಅನುಸರಿಸಬೇಕು’ ಎಂದು ಪ್ರಶ್ನಿಸಿದರು.

‘ನಾಲಗೆ ವ್ಯಕ್ತಿತ್ವವನ್ನು ಸಾರುತ್ತದೆ. ವೀರಶೈವರನ್ನು ನಿಂದಿಸಿರುವ ಕೂಡಲ ಸಂಗಮ ಶ್ರೀಗಳಿಗೆ ಕಾವಿ ತೊಡುವ ಅರ್ಹತೆಯಿಲ್ಲ. ಕೂಡಲೇ ಪೀಠ ಬಿಟ್ಟುಹೋಗಲಿ’ ಎಂದು ಒತ್ತಾಯಿಸಿದರು.

ADVERTISEMENT

‘ಶ್ರೀಗಳು ವೀರಶೈವ ಲಿಂಗಾಯತ ಸಮಾಜವನ್ನೇ ಅವಹೇಳನ ಮಾಡಿದ್ದಾರೆ. ತಪ್ಪಿನ ಅರಿವಾಗಿ ಈಗ ತೇಪೆ ಹಚ್ಚಲು ಯತ್ನಿಸುತ್ತಿದ್ದಾರೆ. 2008ರಲ್ಲಿ ಪಂಚಮಸಾಲಿ ಸಮಾಜದ ಸ್ವಾಮೀಜಿ ಎಂದು ಸ್ವಯಂಘೋಷಿಸಿಕೊಂಡಿರುವ ಅವರನ್ನು ಸಮಾಜದ ಎಲ್ಲರೂ ಒಪ್ಪಿಕೊಂಡಿಲ್ಲ. ಹರಿಹರದ ಪೀಠವೇ ಶ್ರೇಷ್ಠ’ ಎಂದರು.

ಸಮಾಜದ ಮುಖಂಡ ಬಿ.ಸಿ.ಉಮಾಪತಿ ಮಾತನಾಡಿ, ‘ಸಮಾಜವನ್ನು ತಿದ್ದಬೇಕಾದ ಕೂಡಲಸಂಗಮ ಸ್ವಾಮೀಜಿ ಅಸಹ್ಯಕರ ಹೇಳಿಕೆ ನೀಡಿರುವುದು ಖಂಡನೀಯ. ಅವರ ಹೇಳಿಕೆ ಬಸವತತ್ವಕ್ಕೆ ವಿರುದ್ಧವಾಗಿದ್ದು, ಸಮಾಜಕ್ಕೆ ನೋವುಂಟಾಗಿದೆ’ ಎಂದರು.

ಒಳಪಂಗಡಗಳಲ್ಲಿ ಲಿಂಗಾಯತ, ವೀರಶೈವ ಎಂಬ ಬೇಧವಿಲ್ಲ. ವೀರಶೈವರು ಕೇವಲ ಪಂಚಪೀಠದ ಅನುಯಾಯಿಗಳು ಮಾತ್ರವಲ್ಲ; ಬಸವಣ್ಣನನ್ನೂ ಆರಾಧಿಸುತ್ತಾರೆ. ಆದರೆ, ಕೆಲವರು ಈ ವಿಚಾರದಲ್ಲಿ ಗೊಂದಲ ಸೃಷ್ಟಿಸಿ ಸಮಾಜವನ್ನು ಒಡೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.