ಜಗಳೂರು: ತಾಲ್ಲೂಕಿನ ಹಿರೇಮಲ್ಲನಹೊಳೆ ಪಿಡಿಒ ಎ.ಟಿ.ನಾಗರಾಜ್ ಅವರ ಮನೆ ಹಾಗೂ ಖಾಸಗಿ ಕಚೇರಿಗಳ ಮೇಲೆ ಮಂಗಳವಾರ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಅಪಾರ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಅಧಿಕಾರಿಗಳು ಬೆಳಿಗ್ಗೆಯೇ ಏಕಕಾಲದಲ್ಲಿ ಗೌರಿಪುರದಲ್ಲಿನ ನಾಗರಾಜ್ ಅವರಿಗೆ ಸೇರಿದ ಸ್ವಂತ ಮನೆ, ಸ್ನೇಹಿತ ಗುತ್ತಿಗೆದಾರ ಬಸವನಗೌಡನ ಮನೆ, ತಾಲ್ಲೂಕಿನ ಹಿರೇಮಲ್ಲನಹೊಳೆ ಮತ್ತು ಗುರುಸಿದ್ದಾಪುರ ಪಂಚಾಯ್ತಿ ಕಚೇರಿ ಸೇರಿದಂತೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿನ ಖಾಸಗಿ ಕಚೇರಿ ಹಾಗೂ ದಾವಣಗೆರೆಯಲ್ಲಿನ ಬಾಡಿಗೆ ಮನೆಯ ಮೇಲೆಯೂ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ದಾಳಿಯ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಎಸಿಬಿ ಶಿವಮೊಗ್ಗ ವೃತ್ತದ ಅಧಿಕಾರಿ ಜೆ.ಎಸ್.ತಿಪ್ಪೇಸ್ವಾಮಿ ಅವರು, ‘ದಾಳಿ ವೇಳೆಯಲ್ಲಿ 2 ಗೂಡ್ಸ್ ಲಾರಿ, 1 ಬೊಲೆರೊ ವಾಹನ, 3 ಪಲ್ಸರ್ ಬೈಕ್ ಹಾಗೂ ಬೇನಾಮಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಮಯ
ದಲ್ಲಿ ನಾಗರಾಜ್ ಅವರು ದಾವಣಗೆರೆಯಲ್ಲಿನ ಬಾಡಿಗೆ ಮನೆಯಲ್ಲಿದ್ದರು’ ಎಂದು ಮಾಹಿತಿ ನೀಡಿದರು.
ಗುರುಸಿದ್ದಾಪುರ ಹಾಗೂ ಹಿರೇಮಲ್ಲನಹೊಳೆ ಗ್ರಾಮ ಪಂಚಾಯ್ತಿ ಪಿಡಿಒ ಆಗಿರುವ ನಾಗರಾಜ್, ಕೆಲವು ವಾರಗಳ ಹಿಂದೆ ಏಕಕಾಲದಲ್ಲಿ ಐದು ಪಂಚಾಯ್ತಿಗಳ ಪಿಡಿಒ ಆಗಿಯೂ ಕಾರ್ಯನಿರ್ವಹಿಸಿದ್ದರು. ಈ ಸಮಯದಲ್ಲಿ ಅವರು ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಬಾರಿ ಅವ್ಯವಹಾರ ನಡೆಸಿರುವ ಆರೋಪಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು.
ಡಿವೈಎಸ್ಪಿ ಪ್ರಹ್ಲಾದ್, ಪರಮೇಶ್, ಪ್ರಕಾಶ್ ಹಾಗೂ ದಾವಣಗೆರೆ ಸೇರಿದಂತೆ ಶಿವಮೊಗ್ಗ , ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಯ ಎಸಿಬಿ ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.