ADVERTISEMENT

ಪ್ರಾಂಶುಪಾಲರ ಕಿರುಕುಳ: ಉಪನ್ಯಾಸಕ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 7:15 IST
Last Updated 22 ನವೆಂಬರ್ 2017, 7:15 IST

ಹರಪನಹಳ್ಳಿ: ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲ ಹಾಗೂ ಮೇಲಧಿಕಾರಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಉಪನ್ಯಾಸಕ ಶ್ರೀಧರ್ ಅವರನ್ನು ನೌಕರರು ಅಪಾಯದಿಂದ ಪಾರು ಮಾಡಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಶ್ರೀಧರ್‌ ಅವರು, ‘ರಾಣೆಬೆನ್ನೂರಿನಲ್ಲಿ ಬುಧವಾರ ಆರಂಭವಾಗುವ ಥಿಯರಿ ಪರೀಕ್ಷೆಗಳಿಗೆ ನನ್ನನ್ನು ಒಳಗೊಂಡಂತೆ 5 ಜನ ಉಪನ್ಯಾಸಕರನ್ನು ನಿಯೋಜನೆ ಮಾಡಲಾಗಿತ್ತು. ನನ್ನನ್ನು ಕರ್ತವ್ಯದಿಂದ ಬಿಡುಗಡೆ ಮಾಡದೆ ಪ್ರಾಂಶುಪಾಲ ದೇವರಾಜ್‌ ಅವರು ಕಾಲೇಜು ಅವಧಿ ಮುಗಿಯುವ ಮುನ್ನವೇ ಹೊರಟು ಹೋಗಿದ್ದರು.

ಈ ಕುರಿತು ಪರೀಕ್ಷಾ ನಿಯಂತ್ರಣಾಧಿಕಾರಿ ಮಂಜುನಾಥ ಅವರನ್ನು ಸಂಪರ್ಕಿಸಿದಾಗ, ‘ಪರೀಕ್ಷೆ ಕೆಲಸಕ್ಕೆ ಹೋಗದಿದ್ದಲ್ಲಿ ನಿಮ್ಮನ್ನು ಅಮಾನತು ಮಾಡಲಾಗುವುದು’ ಎಂದು ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದು ಚಲಿಸುವ ವಾಹನದ ಅಡಿಯಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದೆ. ತಕ್ಷಣ ಕಾಲೇಜಿನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಿಸಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

‘ಕಾಲೇಜು ಪ್ರಾಂಶುಪಾಲರು, ದಲಿತ ನೌಕರರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಮಹಿಳಾ ಸಿಬ್ಬಂದಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಸಕಾಲಕ್ಕೆ ಹೆರಿಗೆ ರಜೆ ಕೊಡುತ್ತಿಲ್ಲ. ಉನ್ನತ ಶಿಕ್ಷಣ ಪಡೆಯಲು ರಜೆ ನೀಡುತ್ತಿಲ್ಲ’ ಎಂದು ಕಾಲೇಜು ಸಿಬ್ಬಂದಿ ತಹಶೀಲ್ದಾರ್‌ ಕೆ.ಗುರುಬಸವರಾಜ್‌ ಅವರಿಗೆ ದೂರು ನೀಡಿದರು.

‘ಪ್ರಾಂಶು →ಪಾಲರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು. →ಇಲ್ಲವೇ ನಮ್ಮನ್ನು →ಸಾಮೂಹಿಕ →ವರ್ಗಾವಣೆ →ಮಾಡಿ’ ಎಂದು ನೌಕರರು ಬಗಿಪಟ್ಟು ಹಿಡಿದರು.
ಶ್ರೀಧರ್‌ ಅವರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡಬೇಕು. ಜತೆಗೆ ನೌಕರರೊಂದಿಗೆ ಹೊಂದಿಕೊಂಡು ಹೋಗಬೇಕು’ ಎಂದು ತಹಶೀಲ್ದಾರ್‌, ಪ್ರಾಂಶುಪಾಲ ದೇವರಾಜ್‌ ಅವರಿಗೆ ಸೂಚಿಸಿದರು.

ದೇವರಾಜ್‌ ಅವರು ನೌಕರರಲ್ಲಿ ಕ್ಷಮೆಯಾಚಿಸಿ ‘ಎಲ್ಲರೊಂದಿಗೆ ಹೊಂದಿಕೊಂಡು ಹೋಗುತ್ತೇನೆ’ ಎಂದು ಭರವಸೆ ನೀಡಿದರು. ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆ ಮಾಡುವುದಾಗಿ ದಲಿತ ಸಂಘರ್ಷ ಸಮಿತಿ ಮುಖಂಡ ಶಿವಕುಮಾರ್‌ ನಾಯ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.