ADVERTISEMENT

‘ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 5:17 IST
Last Updated 20 ಏಪ್ರಿಲ್ 2017, 5:17 IST

ಜಗಳೂರು: ‘ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ 60ಕ್ಕೂ ಹೆಚ್ಚು ಭೂರಹಿತ ಬಡ ರೈತ ಫಲಾನುಭವಿಗಳಿಗೆ ಬಗರ್‌ಹುಕುಂ ಯೋಜನೆಯಡಿ ಹಕ್ಕುಪತ್ರಗಳನ್ನು ವಿತರಿಸಲಾಗಿದೆ’ ಎಂದು ಶಾಸಕ ಎಚ್‌.ಪಿ. ರಾಜೇಶ್‌ ಅವರು ಹೇಳಿದರು.ತಾಲ್ಲೂಕಿನ ಉದ್ದಗಟ್ಟ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಡಾ. ಅಂಬೇಡ್ಕರ್‌ ಹಾಗೂ ಬಾಬೂ ಜಗ ಜೀವನರಾಂ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

‘ಕಳೆದ 20–30 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದ ಬಡ ರೈತರ ಅರ್ಜಿಗಳು ದಶಕಗಳಿಂದ ನನೆಗುದಿಗೆ ಬಿದ್ದಿದ್ದವು.   ಇದೀಗ ಹಕ್ಕುಪತ್ರ ವಿತರಿಸುವ ಮೂಲಕ ರೈತರು  ಕಚೇರಿಗಳಿಗೆ ಅಲೆಯುವುದಕ್ಕೆ ಅಂತ್ಯ ಹಾಡಲಾಗಿದೆ. ಎಲ್ಲಾ ಗ್ರಾಮಗಳ ದಲಿತ ಕಾಲೊನಿಗಳಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸ ಲಾಗಿದೆ’ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ  ವಸತಿ ಶಾಲೆಗಳನ್ನು ನಿರ್ಮಿಸ ಲಾಗುತ್ತಿದೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಅನ್ನಭಾಗ್ಯ ಯೋಜನೆ ಹಸಿವು ಮುಕ್ತ ಸಮಾಜ ನಿರ್ಮಾಣದ ಹಿನ್ನೆಲೆಯಲ್ಲಿ ಕ್ರಾಂತಿಕಾರಕ ಯೋಜನೆ ಯಾಗಿದೆ ಎಂದು ಹೇಳಿದರು.
ಮುಖಂಡ ಕಿತ್ತೂರು ಜಯಣ್ಣ, ವಕೀಲ ಡಿ. ಶ್ರೀನಿವಾಸ್‌, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಚಿತ್ತಪ್ಪ, ದಲಿತ ಮುಖಂಡ ಜಿ.ಎಚ್‌. ಶಂಭುಲಿಂಗಪ್ಪ, ಎ.ಎಂ.ಕೊಟ್ರೇಶ್‌, ಶಿವಕುಮಾರ್‌, ನಾಗಲಿಂಪ್ಪ, ಹನುಮಂತಪ್ಪ, ಹಟ್ಟಿ ತಿಪ್ಪೇಸ್ವಾಮಿ, ಚಂದ್ರಮೌಳಿ, ಮಂಜುನಾಥ್‌ ಗೌಡ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.