ಜಗಳೂರು: ತಾಲ್ಲೂಕಿನ ಮೆದಗಿನಕೆರೆ ಸಮೀಪ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರನನ್ನು ಉಪಚರಿಸುತ್ತಿದ್ದವರ ಮೇಲೆಯೇ ಬಸ್ ಹರಿದಿದೆ. ಪರಿಣಾಮ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಕಲ್ಲೇಶ್ ಗೌಡ (26), ಸತೀಶ್ (27) ಹಾಗೂ ತಿಪ್ಪೇಸ್ವಾಮಿ (23) ಮೃತಪಟ್ಟವರು. ಸಂಜೆ 7ರ ಸುಮಾರಿಗೆ ಬೈಕ್ನಲ್ಲಿ ತೆರಳುತ್ತಿದ್ದ ಕಲ್ಲೇಶ್ ಗೌಡ ಎಂಬವರು ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಇದನ್ನು ನೋಡಿದ ಖಾಸಗಿ ಬಸ್ನಲ್ಲಿದ್ದ ಪ್ರಯಾಣಿಕರು ಬಸ್ ನಿಲ್ಲಿಸಿ ಗಾಯಾಳುವನ್ನು ಉಪಚರಿಸಲು ಮುಂದಾಗಿದ್ದಾರೆ. ಈ ಸಂದರ್ಭ ದಾವಣಗೆರೆ ಕಡೆಯಿಂದ ವೇಗವಾಗಿ ಬಂದ ಖಾಸಗಿ ಬಸ್ ಜನರ ಮೇಲೆಯೇ ಹರಿದಿದೆ. ಕೆಲವರು ತಪ್ಪಿಸಿಕೊಂಡಿದ್ದಾರೆ. ಬೈಕ್ ಸವಾರ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತಪಟ್ಟ ಕಲ್ಲೇಶ್ ಗೌಡ ತಾಲ್ಲೂಕಿನ ಮೆದಗಿನಕೆರೆ ಗ್ರಾಮದವರು. ತಿಪ್ಪೇಸ್ವಾಮಿ ಜಗಳೂರು ಗೊಲ್ಲರಹಟ್ಟಿ ಗ್ರಾಮದವರು. ಸತೀಶ್ ಇಲ್ಲಿನ ಪಟ್ಟಣ ಪಂಚಾಯ್ತಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿದ್ದರು.
‘ನುಗ್ಗಿಬಂದ ಬಸ್ ಮೂವರು ಮುಗ್ಧರ ಪ್ರಾಣವನ್ನು ಬಲಿ ಪಡೆದಿದೆ. ಅದೃಷ್ಟವಶಾತ್ ಕೆಲವರು ಬಸ್ನ ಕೆಳಗೆ ತೂರಿಕೊಂಡು ಸಾವಿನಿಂದ ಪಾರಾಗಿದ್ದಾರೆ. ಇಲ್ಲವಾಗಿದ್ದರೆ ಇನ್ನೂ ದೊಡ್ಡ ಅನಾಹುತವಾಗುತ್ತಿತ್ತು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಅಪಘಾತಕ್ಕೆ ಕಾರಣನಾದ ಬಸ್ ಚಾಲಕನನ್ನು ಹಿಡಿದು ಥಳಿಸಿದರು. ಬಸ್ನ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.