ADVERTISEMENT

ಸೇವಾ ಪ್ರವೃತ್ತಿ ಬೆಳೆಸಿಕೊಳ್ಳಿ: ಶಾಮನೂರು ಸಲಹೆ

ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 6:01 IST
Last Updated 20 ಮಾರ್ಚ್ 2017, 6:01 IST

ದಾವಣಗೆರೆ: ‘ವೈದ್ಯ ವೃತ್ತಿ ಕೇವಲ ಹಣ ಗಳಿಸುವುದಕ್ಕೆ ಸೀಮಿತಗೊಳಿಸದೇ ಸೇವಾ ಪ್ರವೃತ್ತಿಯನ್ನು ಅಳವಡಿಸಿಕೊಳ್ಳಿ’ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ, ಶಾಸಕರೂ ಆದ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಇಲ್ಲಿನ ಬಾಪೂಜಿ ವಿದ್ಯಾಸಂಸ್ಥೆಯ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲ ಯದ ಸ್ನಾತಕೋತ್ತರ ಪದವಿ  ಪ್ರದಾನ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವೈದ್ಯರಿಗೆ ಸಮಾಜದಲ್ಲಿ ಸಾಕಷ್ಟು ಗೌರವವಿದೆ. ಈ ಕಾರಣಕ್ಕಾಗಿ ಬಿಳಿ ಕೋಟ್ ಇದೆ. ಇಂತಹ ಗೌರವ ಪಡೆದ ತಾವುಗಳು ವೃತ್ತಿಯನ್ನು ಕೇವಲ ಹಣ ಗಳಿಸುವುದಕ್ಕಷ್ಟೇ ಸೀಮಿತಗೊಳಿಸದೇ ಸೇವೆಯಲ್ಲಿ ತೊಡಗಿಕೊಳ್ಳಬೇಕು’ ಎಂದರು.

ಕಳೆದ ಆರು ವರ್ಷಗಳ ಕಾಲ ಉತ್ತಮ ನಡತೆ ಮತ್ತು ವಿದ್ಯಾಭ್ಯಾಸದಿಂದ ತಾವು ಇಂದು ವೈದ್ಯರಾಗಿದ್ದು, ಮುಂದೆಯೂ ಹೆಚ್ಚಿನ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

50 ವರ್ಷಗಳ ಹಿಂದೆ ದಾವಣಗೆರೆ ನಗರದಲ್ಲಿ ಕೇವಲ ನಾಲ್ವರು ವೈದ್ಯರಿದ್ದರು. ಅದರಲ್ಲಿ ಇಬ್ಬರು ದಂತ ವೈದ್ಯರು. ಆದರೆ, ಇಂದು 400ಕ್ಕೂ ಹೆಚ್ಚು ವೈದ್ಯರಿದ್ದಾರೆ. ಇದಕ್ಕೆ ಬಾಪೂಜಿ ವಿದ್ಯಾಸಂಸ್ಥೆಯ ಜೆ.ಜೆ.ಎಂ. ಮೆಡಿಕಲ್ ಕಾಲೇಜು ಕಾರಣ. ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ವೈದ್ಯರು ದೇಶ -ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಜೆ.ಜೆ.ಎಂ. ಮೆಡಿಕಲ್ ಕಾಲೇಜಿನ ಗ್ರಂಥಾಲಯಕ್ಕೆ ಪ್ರತಿ ವರ್ಷ ₹ 1 ಕೋಟಿ ವೆಚ್ಚ ಮಾಡಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಹೊಸ ಹೊಸ ಪುಸ್ತಕಗಳನ್ನು ತರಿಸಲಾಗುತ್ತಿದೆ. ಇದರಿಂದಾಗಿ ಜೆ.ಜೆ.ಎಂ.ಮೆಡಿಕಲ್ ಕಾಲೇಜು ಗ್ರಂಥಾಲಯ ರಾಜ್ಯದಲ್ಲೇ ಅತ್ಯುತ್ತಮ ಗ್ರಂಥಾಲಯದ ಮಾನ್ಯತೆ ಹೊಂದಿದೆ ಎಂದರು.

ಸಮಾರಂಭದಲ್ಲಿ ಡಾ.ಹರೀಶ್ ಕುಮಾರ್, ಇಸ್ಮಾಯಿಲ್ ಇಬ್ರಾಹಿಂ ಘನಿ, ಪ್ರಾಂಶುಪಾಲ ಡಾ.ಮಂಜುನಾಥ್ ಆಲೂರು, ಡಾ.ಎಚ್.ಗುರುಪಾದಪ್ಪ, ಡಾ.ಎಸ್.ಬಿ.ಮುರುಗೇಶ್, ರಾಜೀವ್‌ ಗಾಂಧಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾದ ಡಾ.ಪ್ರಸನ್ನ ಅಣಬೇರು, ಡಾ.ಪಿ.ಇ.ಧನಂಜಯ, ಡಾ.ರವೀಂದ್ರ ಬಣಕಾರ್, ಡಾ.ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.