ADVERTISEMENT

‘ಪ್ರಗತಿಪರ ರೈತ’ ಪ್ರಶಸ್ತಿ ಪಡೆದ ರೈತನಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 6:00 IST
Last Updated 25 ಅಕ್ಟೋಬರ್ 2014, 6:00 IST

ಚಳ್ಳಕೆರೆ: ಸತತ ಬರಗಾಲಕ್ಕೆ ತುತ್ತಾಗಿರುವ ತಾಲ್ಲೂಕಿನಲ್ಲಿ, ದೇವರಮರಿಕುಂಟೆಯ ರೈತ ದಯಾನಂದ ಅವರು ತಮ್ಮ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆದು ಶಿವಮೊಗ್ಗ ಕೃಷಿ ವಿವಿಯಿಂದ ‘ಜಿಲ್ಲಾ ಪ್ರಗತಿಪರ ರೈತ’ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಟಿ.ರಘುಮೂರ್ತಿ ಸಂತಸ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿರುವ ಶಾಸಕರ ಭವನದಲ್ಲಿ ಪ್ರಗತಿಪರ ರೈತ ಎ.ಆರ್.ದಯಾನಂದ ಅವರನ್ನು ಸನ್ಮಾನಿಸಿ ಮಾತನಾಡಿದರು.

ರೈತ ಎ.ಆರ್.ದಯಾನಂದ ಅವರು ತಮ್ಮ ಐದು ಎಕರೆ ಜಮೀನಿನಲ್ಲಿ, ಕೇವಲ ಎರಡು ಇಂಚು ನೀರಿನಿಂದ ಉತ್ತಮ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ತೆಂಗು, ಅಡಿಕೆ, ಬಾಳೆ, ದಾಳಿಂಬೆ, ತೇಗ, ಬೀಟೆ, ಹೂವಿನ ಗಿಡಗಳು, ವಿವಿಧ ಬಗೆಯ ತರಕಾರಿಗಳನ್ನು ಬೆಳೆದಿದ್ದಾರೆ. ಜತೆಗೆ ಕೋಳಿ, ಕುರಿ, ಹಸು ಸಾಕಾಣಿಕೆ ಸೇರಿದಂತೆ ವಿವಿಧ ಬಗೆಯ ಪ್ರಾಣಿಗಳ ಸಾಕಾಣಿಕೆಯಲ್ಲಿ ಯಶಸ್ವಿಯಾ ಗಿದ್ದಾರೆ. ಐದು ಎಕರೆ ಖುಷ್ಕಿ ಭೂಮಿಯನ್ನು ಸಮತಟ್ಟು ಮಾಡುವುದರಿಂದ ಹಿಡಿದು ಕೊಟ್ಟಿಗೆ ಗೊಬ್ಬರ ಮತ್ತು ಸಾವಯವ ಗೊಬ್ಬರವನ್ನು ಸ್ವತಃ
ತಯಾರಿಸಿ ಜಮೀನಿಗೆ ಬಳಸಿ ಉತ್ತಮ ಲಾಭ ಪಡೆದಿದ್ದಾರೆ ಎಂದರು.

ದಯಾನಂದ ಅವರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ ಶಿವಮೊಗ್ಗ ಕೃಷಿ ವಿವಿಯ ಕುಲಪತಿ ಮತ್ತು ಕೃಷಿ ತಜ್ಞರು ಇವರ ಸಾಧನೆ ಪರಿಗಣಿಸಿ ‘ಜಿಲ್ಲಾ ಪ್ರಗತಿಪರ ರೈತ’ ಪ್ರಶಸ್ತಿ ನೀಡಿದ್ದಾರೆ. ಕಡಿಮೆ ನೀರಿನಲ್ಲಿಯೆ ಹಲವು ವಿಧವಾದ ಬೆಳೆ ಬೆಳೆದಿರುವುದನ್ನು ಮನಗಂಡು ಶಿವಮೊಗ್ಗ ದಲ್ಲಿ ಅ.18ರಂದು ನಡೆದ ಕೃಷಿ ಮೇಳದಲ್ಲಿ ಪ್ರಶಸ್ತಿ ನೀಡಿ ಗೌರವಿಸ ಲಾಗಿದೆ. ಇದು ತಾಲ್ಲೂಕು ಹಾಗೂ ಜಿಲ್ಲೆಗೆ ಸಂದಿರುವ ಗೌರವ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.