ಧಾರವಾಡ: ಉತ್ತಮ ಮಳೆಗಾಗಿ ಭಾನುವಾರ ಅಂಜುಮನ್ ಇಸ್ಲಾಂ ಸಂಸ್ಥೆಯ ಆವರಣದಲ್ಲಿ ಸರ್ವ ಧರ್ಮ ಸಾಮೂಹಿಕ ಪ್ರಾರ್ಥನೆ ನಡೆಯಿತು.‘ಎಲ್ಲೆಡೆ ಸಮೃದ್ಧ ಮಳೆಯಾಗಲಿ, ರೈತರು, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಬಾರದು’ ಎಂದು ವಿವಿಧ ಸಮುದಾಯಗಳ ಧಾರ್ಮಿಕ ಮುಖಂಡರು ದೇವರಲ್ಲಿ ಪ್ರಾರ್ಥಿಸಿದರು.
ಓಪನ್ ಆರ್ಮ್ಸ್ ಚರ್ಚ್ ಪಾದ್ರಿ ಸೆಡ್ರಿಕ್ ಜೇಕಬ್ ಮಾತನಾಡಿ, ‘ಬರಗಾಲ ಜಿಲ್ಲೆಗೆ ಬಾರದಿರಲಿ. ನದಿ, ಕೆರೆ, ಕೊಳವೆ ಬಾವಿಗಳು ಉಕ್ಕಿ ಹರಿದು ಜನರಿಗೆ ಹಾಗೂ ಪ್ರಾಣಿಗಳಿಗೆ ಅನುಕೂಲವಾಗಲಿ’ ಎಂದು ಪ್ರಾರ್ಥಿಸಿದರು. ಮನಸೂರಿನ ರೇವಣ ಸಿದ್ದೇಶ್ವರ ಮಠದ ಬಸವರಾಜ ದೇವರು ಮಾತನಾಡಿ, ‘ಸಕಲ ಜೀವ ರಾಶಿಗಳಿಗಾಗಿ ದೇವರು ಮಳೆ ಸುರಿಸಲಿ’ ಎಂದರು.
ಇಸ್ಲಾಂ ಧರ್ಮಗುರು ಮೌಲಾನಾ ಮುಜೀಬ್ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ ಮಳೆಗಾಗಿ ಪ್ರಾರ್ಥಿಸಲು ಬೋಧಿಸಿದರು. ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಮಾತನಾಡಿ, ‘ಸಾಮೂಹಿಕ ಪ್ರಾರ್ಥನೆ ಹಿಂದೆ ಅದಮ್ಯ ಶಕ್ತಿಯಿದೆ’ ಎಂದರು.
ಮಾಜಿ ಸಂಸದ ಐ.ಜಿ. ಸನದಿ, ವಿ.ಡಿ. ಕಾಮರೆಡ್ಡಿ, ಸುಭಾಸ ಶಿಂಧೆ, ರಾಜು ಅಂಬೋರೆ, ಪ್ರಕಾಶ ಘಾಟಗೆ, ಅಬ್ದುಲ್ ಅಜೀಜ್ ದಾಸನಕೊಪ್ಪ, ನಜೀರ್ ಹುಸೇನ ಮನಿಯಾರ್, ಸಹ ಕಾರ್ಯದರ್ಶಿ ರಫೀಕ್ ಅಹಮ್ಮದ್ ಶಿರಹಟ್ಟಿ, ಎ.ಎಂ.ಜಮಾದಾರ, ಡಾ.ಎಸ್.ಎ. ಸರ್ಗಿರೊ, ಎಸ್.ಎಸ್.ಸೌದಾಗಾರ, ಮಹ್ಮದ್ ಕಳ್ಳಿಮನಿ ಪಾಲ್ಗೊಂಡಿದ್ದರು.
* *
ಕಾಳಿ ನದಿ ಯೋಜನೆ ಜಾರಿ ಮತ್ತು ಚೆಕ್ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ. ಮಹಾದಾಯಿ,ಕಳಸಾ ಬಂಡೂರಿ ಯೋಜನೆ ಬಗ್ಗೆ ನಿರ್ಲಕ್ಷ್ಯ ತಾಳಿರುವುದು ಸರಿಯಲ್ಲ
ಬಸವರಾಜ ದೇವರು
ರೇವಣ ಸಿದ್ದೇಶ್ವರ ಮಠ, ಮನಸೂರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.