ಹುಬ್ಬಳ್ಳಿ: ಕನ್ನಡ ಕಲಿಕೆಯ ಬಗ್ಗೆ ಮಕ್ಕಳು ಮತ್ತು ಪೋಷಕರಿಗೆ ಕೀಳರಿಮೆ ಬೇಡ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿನ ನೆಹರೂ ಮೈದಾನದಲ್ಲಿ ವಿಶ್ವ ಕನ್ನಡ ಬಳಗ ಸಂಘಟನೆ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ಜಾನಪದ ಸಾಂಸ್ಕೃತಿಕ ಹಾಗೂ ದೇಶಿ ಕ್ರೀಡಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದ ಅವರು, ಕನ್ನಡಿಗರು ತಮ್ಮ ಮಾತೃ ಭಾಷೆ ಕನ್ನಡದಲ್ಲಿ ಕಲಿತರೂ ಪ್ರತಿಭಾವಂತರಾಗಬಹುದು. ಉನ್ನತ ಹುದ್ದೆ ಗಳಿಸಬಹುದು ಎಂದರು.
ಪೋಷಕರು ಇಂಗ್ಲಿಷ್ ವ್ಯಾಮೋಹದಿಂದ ಹೊರಬರಬೇಕು. ಜ್ಞಾನಾರ್ಜನೆಗಾಗಿ ಮತ್ತು ವೃತ್ತಿಗಾಗಿ ಇಂಗ್ಲಿಷ್ ಕಲಿತರೂ ಕನ್ನಡವನ್ನು ಮರೆಯಬಾರದು ಎಂದರು.
ಭವ್ಯ ಮೆರವಣಿಗೆ: ಇಲ್ಲಿನ ಮೂರುಸಾವಿರಮಠದ ಆವರಣದಿಂದ ನೆಹರೂ ಮೈದಾನದ ವರೆಗೆ ಭುವನೇಶ್ವರಿ ತಾಯಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಜಾನಪದ ಕಲಾತಂಡಗಳು ಗಮನ ಸೆಳೆದವು. ಸಿಂಗಾರಗೊಂಡಿದ್ದ ಆನೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿತು.
ಮನಸೂರೆಗೊಂಡ ಕಾರ್ಯಕ್ರಮ: ನಾಡಗೀತೆ ನೃತ್ಯ ರೂಪಕ, ಕರಡಿ ಮಜಲು ವಾದನ, ವಚನ ನೃತ್ಯ, ಭರತನಾಟ್ಯ, ಜನಪದ ನೃತ್ಯ, ಜಗ್ಗಲಗಿ ಕುಣಿತ ಪ್ರೇಕ್ಷಕರ ಮನಸೂರೆಗೊಂಡವು.
ಹುಬ್ಬಳ್ಳಿ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸದಾನಂದ ಡಂಗನವರ, ಹುಬ್ಬಳ್ಳಿ–ಧಾರವಾಡ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ಸಮ್ಮೇಳನಾಧ್ಯಕ್ಷ ಡಾ.ಸಂಗಮೇಶ ಹಂಡಗಿ, ವಿಶ್ವ ಕನ್ನಡ ಬಳಗದ ಅಧ್ಯಕ್ಷ ಸದಾಶಿವ ಚೌಶೆಟ್ಟಿ, ಗೌರವಾಧ್ಯಕ್ಷ ಶರಣಪ್ಪ ಕೊಟಗಿ, ಅಂದಾನೆಪ್ಪ ವಿಭೂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.