ADVERTISEMENT

ಕಾಳಿ ನದಿ ನೀರು: ಮಾರ್ಗ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 5:38 IST
Last Updated 19 ಏಪ್ರಿಲ್ 2017, 5:38 IST

ಅಳ್ನಾವರ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದನ್ನು ಮನಗಂಡು ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಕಾಳಿ ನದಿಯಿಂದ ನೀರು ತರುವ ಸುಮಾರು ₹ 70 ಕೋಟಿ ಅಂದಾಜು ವೆಚ್ಚದ ಯೋಜನೆಗಾಗಿ ಮಾರ್ಗದ ಪರಿಶೀಲನೆ ಮಂಗಳವಾರ ನಡೆಯಿತು.ಪಟ್ಟಣ ಪಂಚಾಯ್ತಿ ಅಡಳಿತ ಹಾಗೂ ಜಲ ಮಂಡಳಿ ಅಧಿಕಾರಿಗಳು ದಾಂಡೇಲಿ ಮಾರ್ಗವಾಗಿ ನೀರು ಬರುವ ಮಾರ್ಗವನ್ನು ಪರಿಶೀಲಿಸಿದರು.

 ಹಳೇ ದಾಂಡೇಲಿ ಹತ್ತಿರ ಇರುವ ಸರ್ಕಾರಿ ಪಿಯು ಕಾಲೇಜು ಪಕ್ಕ ಹಳಿಯಾಳ ಪಟ್ಟಣಕ್ಕೆ ನೀರು ಸಾಗುವ ಪಂಪ್‌ಹೌಸ್‌ ಇದೆ. ಅದರ ಪಕ್ಕದ ಜಾಗದಲ್ಲಿ ಜಾಕವೆಲ್ ನಿರ್ಮಾಣ ಹಾಗೂ ಜಾವಳ್ಳಿ ಗ್ರಾಮದ ಹತ್ತಿರ ಸುಮಾರು ಒಂದು ಎಕರೆ ಜಾಗದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸುವ ಸ್ಥಳ ಹಾಗೂ ಪೈಪ್‌ಲೈನ್‌ ಸಾಗುವ ಮಾರ್ಗ ಹಾಗೂ ವಿದ್ಯಾ ನಗರದಲ್ಲಿ ಮೇಲ್ಮಟ್ಟದ ಜಲಾಗಾರ ಕಟ್ಟುವ ಸ್ಥಳದ ಪರಿಶೀಲನೆ ಮಾಡಲಾಗಿದೆ ಎಂದು ಸ್ಥಳಕ್ಕೆ ಬೇಟಿ ನೀಡಿ ಬಂದ  ನಂತರ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.

ಪಟ್ಟಣ ಪಂಚಾಯ್ತಿ ಪ್ರಭಾರ ಅಧ್ಯಕ್ಷ ಉಸ್ಮಾನ ಬಾತಖಂಡಿ ಮಾತನಾಡಿ, ‘ಈ ಯೋಜನೆ ಅನುಷ್ಠಾನದಿಂದ ಪಟ್ಟಣದ ಜನತೆಯ ಕುಡಿಯುವ ನೀರಿನ ದಾಹವನ್ನು ನೀಗಿಸಲು ಸಾಧ್ಯವಾಗುತ್ತದೆ. ಈ ಯೋಜನೆಗೆ ಸರ್ಕಾರದ ಅನುದಾನ ಅಗತ್ಯವಿದೆ. ರಾಜ್ಯ ಸಂಪುಟದಲ್ಲಿ ಈ ವಿಷಯ ಪ್ರಸ್ತಾಪ ಮಾಡಲು ಶಾಸಕರಿಗೆ ಮನವಿ ಮಾಡಲಾಗುವುದು. ನಂತರ ಟೆಂಡರ್‌ ಕರೆದು ಮುಂದಿನ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದರು.ಜಲ ಮಂಡಳಿಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಬಸವರಾಜ ಕಡೇಮನಿ ಹಾಗೂ ದೀಪಕ್‌ ಕಿತ್ತೂರ ಮತ್ತಿತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.