ಧಾರವಾಡ: ‘ಗ್ರಾಮೀಣ ಜನತೆಯ ಜೀವನ ಮಟ್ಟ ಸುಧಾರಿಸಿ ಆರ್ಥಿಕವಾಗಿ ಅಭಿವೃದ್ಧಿ ಕಾಣುವಂತೆ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣ ಅನುಷ್ಠಾನಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಆರ್.ಸ್ನೇಹಲ್ ತಿಳಿಸಿದರು.ತಾಲ್ಲೂಕು ಪಂಚಾಯ್ತಿ ವತಿಯಿಂದ ನಗರದ ಹಳೇ ಬಸ್ ನಿಲ್ದಾಣದ ಬಳಿ ಮಂಗಳವಾರ ಕೂಲಿ ಬೇಡಿಕೆ ಅಭಿಯಾನದಲ್ಲಿ ಪಾಲ್ಗೊಂಡು, ಕೂಲಿಕಾರರಿಗೆ ಉದ್ಯೋಗ ಮಾಹಿತಿ ಒದಗಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಂದು ಅನೇಕ ಜನರು ಹಳ್ಳಿಯಿಂದ ಶಹರಕ್ಕೆ ಉದ್ಯೋಗ ಅರಸಿ ಬರುತ್ತಿದ್ದಾರೆ. ಅವರಿಗೆ ತಮ್ಮ ಗ್ರಾಮದಲ್ಲೇ ಕೆಲಸ ನೀಡಲಾಗುತ್ತಿದ್ದು ಇದರ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಕೆಲಸ ನಿರ್ವಹಿಸಿದ ವಾರದೊಳಗೆ ಕೂಲಿ ಪಾವತಿ ಮಾಡಲಾಗುತ್ತಿದ್ದು, ಮಹಿಳೆ ಹಾಗೂ ಪುರುಷರಿಗೆ ಸಮಾನ ಕೂಲಿ ನೀಡಲಾಗುವುದು. ಕೆಲಸದ ಸ್ಥಳವು 5 ಕಿ.ಮೀ.ಗೂ ದೂರವಿದ್ದರೆ ಅವರಿಗೆ ಶೇ 10ರಷ್ಟು ಹೆಚ್ಚಿನ ಕೂಲಿ ಪಾವತಿ ಮಾಡಲಾಗುವುದು. ಜತೆಗೆ ಕೂಲಿ ಹಣ ದಿನಕ್ಕೆ ₹236ರಂತೆ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಇದರಿಂದ ದುಡಿಯುವ ಕೈಗಳಿಗೆ ಕೆಲಸ ಕೊಡುವುದರ ಜತೆಗೆ ಅವರ ಆರೋಗ್ಯವನ್ನು ಕಾಪಾಡಿದಂತಾಗುತ್ತದೆ’ ಎಂದರು.
‘ಉದ್ಯೋಗ ಬಯಸುವ ಕೂಲಿ ಕಾರ್ಮಿಕರು ಪ್ರತಿ ದಿನದಲ್ಲಿ 6ರಿಂದ 7 ಗಂಟೆ ಕೆಲಸ ಮಾಡುವ ಅವಕಾಶವಿದೆ. ನಗರಕ್ಕೆ ಬಂದು ಕೆಲಸ ಮಾಡುವುದರಿಂದ ಸಮಯ ವ್ಯರ್ಥವಾಗುತ್ತದೆ. ಜತೆಗೆ ಊಟ ಹಾಗೂ ಪ್ರಯಾಣದ ಖರ್ಚಿಗೆ ಹಣ ಬೇಕಾಗುತ್ತದೆ. ಆದರೆ ಗ್ರಾಮದಲ್ಲಿಯೆ ಕೂಲಿ ಕೆಲಸ ನಿರ್ವಹಿಸುವವರಿಗೆ ಸಮಯದ ಉಳಿತಾಯ ಜೊತೆಗೆ ತಮ್ಮ ಹೊಲದ ಕೆಲಸ, ಹೈನುಗಾರಿಕೆ, ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲಿದೆ. ಈ ಯೋಜನೆ ಯಶಸ್ವಿ ಅನುಷ್ಠಾನಗೊಳಿಸಲು ಗ್ರಾಮೀಣ ಪ್ರದೇಶದಲ್ಲಿ ಸಭೆ ಅಧಿಕಾರಿಗಳು ಸಭೆ ನಡೆಸಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.